ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ನಡೆದ ಭಗವಾನ್ ಸತ್ಯಸಾಯಿ ಬಾಬಾ ಅವರ 93ನೇ ಜಯಂತ್ಯುತ್ಸವ ಮತ್ತು 'ಜಾಗತಿಕ ಯುವ ಸಮ್ಮೇಳನ'ದ ಸಮಾರೋಪದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಜಾಗತಿಕ ಮಟ್ಟದ ಸಾಧಕರಿಗೆ ಸತ್ಯಸಾಯಿ ಲೋಕ ಸೇವಾ ಸಂಸ್ಥೆ ನೀಡುವ 'ಸತ್ಯಸಾಯಿ ಮಾನವ ಅಭ್ಯುದಯ ಪ್ರಶಸ್ತಿ' ಪ್ರದಾನ ಮಾಡಿದರು.
ಕಾರ್ತಿಕ್ ಸ್ವಾನಿ (ಶಿಕ್ಷಣ), ಸುನೀಲ್ ಕುಮಾರ್ (ಆರೋಗ್ಯ), ಅಂಬಿಕಾ ಕಾಮೇಶ್ವರಿ (ಸಂಗೀತ, ನೃತ್ಯ), ವಿನಾಯಕ ಲೋಹಾನಿ (ಸಾಮಾಜಿಕ ಸೇವೆ), ತೆಗ್ಲಾ ಲೊರೋಪೆ (ಕ್ರೀಡೆ), ಬಿನಾಲಕ್ಷ್ಮೀ ನೆಪ್ರಂ ( ಮಹಿಳಾ ಕಲ್ಯಾಣ), ಪೂರ್ಣಿಮಾ ಬರ್ಮನ್ (ಪರಿಸರ) ಅವರಿಗೆ ವೆಂಕಯ್ಯ ನಾಯ್ಡು ಅವರು ಪ್ರಶಸ್ತಿ ನೀಡಿ, ಗೌರವಿಸಿದರು.
ರಾಜ್ಯಪಾಲ ವಜುಬಾಯಿ ವಾಲಾ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಕ್ರಿಕೆಟಿಗ ಸುನೀಲ್ ಗವಾಸ್ಕರ್, ಋಷಿಕೇಶದ ಚಿದಾನಂದ ಸರಸ್ವತಿ ಸ್ವಾಮೀಜಿ, ಸತ್ಯಸಾಯಿ ಲೋಕ ಸೇವಾ ಸಂಸ್ಥೆ ಮುಖ್ಯ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ, ಸಾಯಿಬಾಬಾ ಅವರ ಸಂದೇಶ ವಾಹಕ ಮಧುಸೂದನ್ ನಾಯ್ಡು ಉಪಸ್ಥಿತರಿದ್ದರು
ಜನಸೇವೆಯೇ ನಿಜವಾದ ಪೂಜೆ: ವೆಂಕಯ್ಯ
‘ಆಡಂಬರದ ಪೂಜೆಗಿಂತ ಪ್ರೀತಿಯಿಂದ ಜನಸೇವೆ ಮಾಡುವುದೇ ನಿಜವಾದ ಪೂಜೆ. ಅದಕ್ಕಾಗಿ ಮಠಾಧಿಪತಿಗಳು, ಗುರುಗಳು ತಮ್ಮ ಪೀಠ ಬಿಟ್ಟು ಅಸಹಾಯಕರಿಗೆ ನೆರವಾಗಬೇಕು’ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶುಕ್ರವಾರ ನಡೆದ ಭಗವಾನ್ ಸತ್ಯಸಾಯಿ ಬಾಬಾ ಅವರ 93ನೇ ಜಯಂತ್ಯುತ್ಸವ
ಮತ್ತು ‘ಜಾಗತಿಕ ಯುವ ಸಮ್ಮೇಳನ’ದ ಸಮಾರೋಪದಲ್ಲಿ ಸಾಧಕರಿಗೆ ‘ಸತ್ಯಸಾಯಿ ಮಾನವ ಅಭ್ಯುದಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
‘ಗಾಂಧೀಜಿ ಅವರು ಗ್ರಾಮಗಳಿಗೆ ಮರಳಿ ಎಂದು ಕರೆ ಕೊಟ್ಟರು. ಆದರೆ ನಮ್ಮ ನಾಯಕರು ಹಳ್ಳಿಗಳನ್ನು ಬೆನ್ನ ಹಿಂದೆ ಬಿಟ್ಟು ನಗರಗಳತ್ತ ಓಡಿದರು. ಸಮಾಜದಲ್ಲಿ ಇಂದಿಗೂ ಜಾರಿಯಲ್ಲಿರುವ ಲಿಂಗ, ಜಾತಿ ತಾರತಮ್ಯ ಹೋಗಲಾಡಿಸಬೇಕಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.