ADVERTISEMENT

ಸೂರ್ಯಕಾಂತಿಗೆ ವಿಚಿತ್ರ ರೋಗ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 10:45 IST
Last Updated 21 ಸೆಪ್ಟೆಂಬರ್ 2011, 10:45 IST

ಗುಡಿಬಂಡೆ: ಸಾಲಸೋಲ ಮಾಡಿ ಬಿತ್ತನೆ ಮಾಡಿದ್ದ ಸೂರ್ಯಕಾಂತಿ ಬೆಳೆ ಸೊಂಪಾಗಿ ಬೆಳೆದು ನಿಂತಿದ್ದು, ಲಾಭದ ನೀರಿಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ.  ಮಿಂಚುತ್ತಿದ್ದ ಸೂರ್ಯಕಾಂತಿ ಹೂಗಳು ಇದ್ದಕ್ಕಿದ್ದ ಹಾಗೆ ಕಾಂಡದಿಂದ ಬೇರ್ಪಟ್ಟು ಕೆಳೆಗೆ ಬಿದ್ದು ಹೋಗುತ್ತಿರುವುದು ಆತಂಕ ಮೂಡಿಸಿದೆ ಎಂದು ತಾಲ್ಲೂಕಿನ ಹಂಪ ಸಂದ್ರ ಗ್ರಾಮದ ರೈತ ಬೆಣ್ಣೆಪರ್ತಿ ನಾರಾಯಣಪ್ಪ ಅಳಲು ತೋಡಿ ಕೊಂಡರು.

ಸಂಪೂರ್ಣ ಮಳೆಯಾಶ್ರಿತ ಏಳು ಎಕರೆ ಜಮೀನಿನಲ್ಲಿ ಬಾಗೇಪಲ್ಲಿ ಕೃಷ್ಣ ಸೀಡ್ಸ್ ಕೇಂದ್ರದಲ್ಲಿ ಪೈನೇರ್ ತಳಿಯ ಸೂರ್ಯಕಾಂತಿ ಬೀಜ ಖರೀದಿಸಿ ಬಿತ್ತಿದ್ದೆ. ಬೆಳೆಗಾಗಿ ರೂ. 1 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿದ್ದೇನೆ. ಪ್ರತಿ ಕ್ವಿಂಟಲ್‌ಗೆ ರೂ. 3200 ಬೆಲೆಯಿರುವ  ಸಂದರ್ಭದಲ್ಲಿ ಉತ್ತಮ ಫಸಲು ನೆಲ ಕಚ್ಚುತ್ತಿರುವುದರಿಂದ ದಿಕ್ಕು ತೋಚ ದಾಗಿದೆ  ಎಂದು ನಾರಾಯಣಪ್ಪ ಪ್ರಜಾವಾಣಿಗೆ ತಿಳಿಸಿದರು.

ಸೂರ್ಯಕಾಂತಿ ಹೂವಿನ ಹಿಂದಿನ ತೊಗಟೆ ಮೇಲೆ ಮೊದಲಿಗೆ ಕಪ್ಪುಗೆರೆ ಕಾಣಿಸಿಕೊಳ್ಳುತ್ತದೆ. ಚಾಕುವಿನಿಂದ ಕತ್ತರಿಸಿದ ಹಾಗೆ ಕಂಡ ಸ್ವಲ್ಪ ಹೊತ್ತಿನ ನಂತರ ಹೂವು ಉದುರಿ ಕೆಳಗೆ ಬೀಳುತ್ತಿದೆ. ಈಗಾಗಲೇ 7 ಎಕರೆ ಜಮೀನಿನ ಶೇ. 10ರಷ್ಟು ಪ್ರದೇಶದಲ್ಲಿ ಹೂ ನೆಲಕ್ಕುರುಳಿದೆ. ಕೃಷಿ ಇಲಾಖೆ ಅಧಿಕಾರಿಗಳಿಗೆ ತಕ್ಷಣ ವಿಷಯ ತಿಳಿಸ ಲಾಗಿದೆ. ಅವರಿನ್ನೂ ಸ್ಥಳಕ್ಕೆ ಬಂದಿಲ್ಲ ಎಂದು ರೈತ ಮುಖಂಡ ಲಕ್ಷ್ಮೀ ನಾರಾಯಣ ತಿಳಿಸಿದರು.

ಕುತ್ತಿಗೆ ರೋಗ
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ನಟರಾಜ್ ಹಾಗೂ ತಾಲ್ಲೂಕು ಕೃಷಿ ಅಧಿಕಾರಿ ನರಸರಾಜು ಅವರನ್ನು ಸಂಪರ್ಕಿಸಿದಾಗ ಲಕ್ಷಣಗಳನ್ನು ಗಮನಿಸಿದರೆ ಇದು ಕುತ್ತಿಗೆ ಕೀಟದ ರೋಗ ಇರಬಹುದು. ಸ್ಥಳಕ್ಕೆ ತಕ್ಷಣ ಭೇಟಿ ನೀಡಲಾಗುವುದು. ಕಾರಣ ಪತ್ತೆಹಚ್ಚಲು ಆಗದೆ ಹೋದಲ್ಲಿ ಹೆಬ್ಬಾಳ ಕೃಷಿ ವಿಜ್ಞಾನ ಕೇಂದ್ರದಿಂದ ವಿಜ್ಞಾನಿಗಳನ್ನು ಕರೆಸಿ ಪರಿಹಾರ ಸೂಚಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.