ಗೌರಿಬಿದನೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ದಿನಗೂಲಿ ಮತ್ತು ಗೌರವಧನ ನೌಕರರ ಮಹಾ ಮಂಡಳಿ ಅಧ್ಯಕ್ಷ ಪ್ರಮೋದ್ ಚಿಕ್ಕಮಣ್ಣೂರು ಮಾತನಾಡಿ, ಪಟ್ಟಣದ ಬಾಲಕರ ಸರ್ಕಾರಿ ಕಾಲೇಜು ಹಾಸ್ಟೆಲ್ನಲ್ಲಿ ದುಡಿಯುತ್ತಿದ್ದ ಎ.ಮುದ್ದಪ್ಪ ಎಂಬುವರು ಸಂಬಳ ಕೇಳಲು ಹೋದಾಗ ಸಮಾಜ ಕಲ್ಯಾಣ ಅಧಿಕಾರಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.
8 ತಿಂಗಳಿನಿಂದ ವೇತನವನ್ನೇ ನೀಡಿಲ್ಲ. ದಿನಗೂಲಿ ಲೆಕ್ಕದಲ್ಲಿ ಹಿಂದೆ ಸಂಬಳ ನೀಡುತ್ತಿದ್ದರು. ಈಗ ಹೊರಗುತ್ತಿಗೆಗೆ ನೀಡಿರುವುದರಿಂದ ಹಲವು ಸಮಸ್ಯೆಗಳು ಸೃಷ್ಟಿಯಾಗಿವೆ ಎಂದು ದೂರಿದರು.
ಇದೇ ವೇಳೆ ಹೊರಗುತ್ತಿಗೆ ಪದ್ಧತಿಯನ್ನು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರು ಖಂಡಿಸಿ, ಘೋಷಣೆ ಕೂಗಿದರು.
ಮಹಾ ಮಂಡಳಿ ತಾಲ್ಲೂಕು ಅಧ್ಯಕ್ಷ ಕೆ.ಎನ್.ನರಸಿಂಹಮೂರ್ತಿ ಮಾತನಾಡಿ ತಾಲ್ಲೂಕು ಸಮಾಜ ಕಲ್ಯಾಣಧಿಕಾರಿ ಪುರುಷೋತ್ತಮ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಕೂಡಲೇ ವರ್ಗಾವಣೆ ಮಾಡಬೇಕು. ಕೂಡಲೇ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ತಾಲ್ಲೂಕು ಉಪಾಧ್ಯಕ್ಷ ಸಿ.ಮಲೇಶ್, ತಾಲ್ಲೂಕು ಭೋವಿ ಸಂಘದ ಯುವ ಅಧ್ಯಕ್ಷ ಉದಯ್ ಕುಮಾರ್, ಭ್ರಷ್ಟಾಚಾರ ವಿರೋಧಿ ಸಮಿತಿ ಅಧ್ಯಕ್ಷ ಕೆ.ಟಿ.ಅಂಜನಮೂರ್ತಿ, ವಾಲ್ಮೀಕಿ ಯುವ ಸೇನೆ ಅಧ್ಯಕ್ಷ ಗಂಗಾಧರಪ್ಪ, ಸಮತಾ ಸೈನಿಕ ದಳದ ಕಡಬೂರು ಅಶ್ವತ್ಥಪ್ಪ, ತಾಲ್ಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.