ಚಿಕ್ಕಬಳ್ಳಾಪುರ: ಜಿಲ್ಲೆಯ ಜಲ ಸಂವರ್ಧನೆ ಯೋಜನೆಯ ಚಿಂತಾಮಣಿ ಯೋೀಜನಾ ಘಟಕದ ವತಿಯಿಂದ ಅಭಿವೃದ್ದಿಪಡಿಸಲಾದ 33 ಕೆರೆಗಳನ್ನು ಸಮುದಾಯಕ್ಕೆ ಹಸ್ತಾಂತರಿಸಲು ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಗುರುವಾರ ಅನುಮೋದನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಲಸಂವರ್ಧನೆ ಯೋಜನಾ ಸಂಘದ ಜಿಲ್ಲಾ ಅನುಮೋದನಾ ಸಮಿತಿ ಸಭೆಯಲ್ಲಿ ಕೆರೆಗಳ ಹಸ್ತಾಂತರ ವಿಷಯದ ಬಗ್ಗೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಲಸಂವರ್ಧನೆ ಯೋಜನೆಯಿಂದ ಅಭಿವೃದ್ಧಿ ಪಡಿಸಲಾಗಿರುವ ಕೆರೆಗಳ ನಿರ್ವಹಣೆ ಉಸ್ತುವಾರಿಯನ್ನು ಉತ್ತಮವಾಗಿ ನೋಡಿಕೊಳ್ಳುವುದರ ಜೊತೆಗೆ ಕೆರೆ ತುಂಬಿದಾಗ ನೀರಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲು ಮತ್ತು ಮೀನುಗಾರಿಕೆಗೆ ಅವಕಾಶ ಕೊಟ್ಟಿರುವುದು ಉತ್ತಮ ಸಂಗತಿ’ ಎಂದರು. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎ.ಅಶ್ವಥಯ್ಯ ಮಾತನಾಡಿ,
‘ಪ್ರಥಮ ಹಂತದ ರೂಪದಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲ್ಲೂಕುಗಳ ವ್ಯಾಪ್ತಿಯ 371 ಕೆರೆಗಳನ್ನು ಸಮುದಾಯಕ್ಕೆ ಹಸ್ತಾಂತರಿಸಲು ಜಿಲ್ಲಾ ಅನುಮೋದನಾ ಸಮಿತಿ ಸಭೆಯಿಂದ ಈಗಾಗಲೇ ಅನುಮೋದನೆ ಪಡೆಯಲಾಗಿದೆ’ ಎಂದರು.ಜಿ.ಪಂ.ಉಪಕಾರ್ಯದರ್ಶಿ ಎಸ್.ಎಂ.ಜುಲ್ಫಿಕರುಲ್ಲಾ, ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಯೋಜನಾ ಘಟಕದ ಎಂಜಿನಿಯರ್ಗಳು, ತಜ್ಞರು, ಕರೆ ಅಭಿವೃದ್ದಿ ಸಂಘಗಳ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.