ADVERTISEMENT

ಚಿಕ್ಕಬಳ್ಳಾಪುರದಲ್ಲಿ ಖಾದಿ ತರಬೇತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 8:41 IST
Last Updated 17 ಜನವರಿ 2018, 8:41 IST

ಗುಡಿಬಂಡೆ: ಸುಮಾರು ₹ 5 ಕೋಟಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶೀಘ್ರವಾಗಿ ಖಾದಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ತಿಳಿಸಿದರು.

ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕೃಷಿ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ್ದ ಸಿರಿಧಾನ್ಯಗಳ ಮೇಳ ಹಾಗೂ ಸಂಕ್ರಾಂತಿ ಸಂಭ್ರಮದ ಸುಗ್ಗಿ-ಹುಗ್ಗಿ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿಯ ಕನಸು 1957ರಲ್ಲಿ ಖಾದಿ ಗ್ರಾಮದಿಂದ ನನಸಾಯಿತು. ಆದರೆ ಇದುವರೆಗೂ ಜಿಲ್ಲೆಯಲ್ಲಿ ಖಾದಿ ಭವನ ನಿರ್ಮಿಸಿರಲಿಲ್ಲ. ಬಜೆಟ್‍ನಲ್ಲಿ ತರಬೇತಿ ಕೇಂದ್ರ ನಿರ್ಮಿಸಲು ಅನುದಾನ ಮಂಜೂರಾಗಿದೆ. ಭವನ ವನ್ನು ಮುಖ್ಯಮಂತ್ರಿ ಶೀಘ್ರದಲ್ಲಿಯೇ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ADVERTISEMENT

'ರೈತರಿಗೆ ಸುಗ್ಗಿಹಬ್ಬವೇ ಹೊಸ ವರ್ಷವಾಗಿದೆ. ರೈತರು ಶ್ರಮಪಟ್ಟು ಬೆವರು ಸುರಿಸಿ ಉತ್ಪಾದಿಸಿದ ಧಾನ್ಯಗಳನ್ನು ಪೂಜಿಸಿ, ರಾಸುಗಳ ಮೆರವಣಿಗೆ ಮಾಡಲಾಗುತ್ತದೆ. ಹಿಂದೆ ಸುಗ್ಗಿಹಬ್ಬದಂದು ಗ್ರಾಮೀಣ ಭಾಗದಲ್ಲಿ ಹಲವಾರು ಕ್ರೀಡೆ ಸ್ಪರ್ಧೆಗಳು ನಡೆಯುತ್ತಿದ್ದವು. ಈಗ ಅವೆಲ್ಲ ಮರೀಚಿಕೆಯಾಗಿವೆ, ಕ್ರಿಕೆಟ್, ಮೊಬೈಲ್‌ಗೆ ಯುವಕರು ದಾಸ ರಾಗಿದ್ದರಿಂದ ಗ್ರಾಮೀಣ ಕ್ರೀಡೆಗಳು ಕಾಣೆಯಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾಮಠದ ಪೀಠಾಧ್ಯಕ್ಷ ಮಂಗಳಾ ನಂದನಾಥ ಸ್ವಾಮೀಜಿ ಸಾನ್ನಿಧ್ಯವನ್ನು ವಹಿಸಿದ್ದರು.

ರಂಗೋಲಿ ಸ್ಪರ್ಧೆ ಹಾಗೂ ಸಿರಿಧಾನ್ಯಗಳ ಪ್ರದರ್ಶನ: ವರ್ಲಕೊಂಡ ಗ್ರಾಮ ಪಂಚಾಯಿತಿ ಮುಂದೆ ಕೃಷಿ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ದಶಮಾನಗಳ ಹಿಂದೆ ರೈತರು ಅನುಸರಿಸುತ್ತಿದ್ದ ಬೇಸಾಯ ಪದ್ಧತಿಯ ಕ್ರಮ ಹಾಗೂ ಉಪಕರಣಗಳ ಪ್ರದರ್ಶನ ವಿಶೇಷವಾಗಿತ್ತು. ರಾಜ್ಯದ 23 ವಿವಿಧ ಜನಪದ ಕಲಾ ತಂಡಗಳು ಕಲಾ ದಿಬ್ಬಣದಲ್ಲಿ ಭಾಗವಹಿಸಿ ಮನರಂಜಿಸಿದವು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವರಲಕ್ಷ್ಮಿ ಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಬಯಮ್ಮ ಅಕ್ಕಲರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು, ಕೃಷಿ ಇಲಾಖೆ ಉಪ ನಿರ್ದೇಶಕಿ ಅನುರೂಪಾ, ಕೆಡಿಪಿ ಸದಸ್ಯ ಕೃಷ್ಣೇಗೌಡ, ವರ್ಲಕೊಂಡ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರನಾಥ, ಸುಮಿತ್ರಮ್ಮ, ನಾರಾಯಣಸ್ವಾಮಿ, ಲಕ್ಷ್ಮೀನರಸಮ್ಮ, ಆವಲರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್. ನರಸಿಂಹರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.