ಗೌರಿಬಿದನೂರು: ‘ಸಮಾಜಕ್ಕೆ ರಾಮಾಯಣದಂತಹ ಮಹಾನ್ ಗ್ರಂಥ ರಚಿಸಿ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಸಮುದಾಯದ ಎಲ್ಲರೂ ಪಾಲಿಸಬೇಕಾಗಿದೆ’ ಎಂದು ನಗರಸಭೆ ಅಧ್ಯಕ್ಷೆ ಕೆ.ಎಂ. ಗಾಯತ್ರಿ ಬಸವರಾಜ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕಲ್ಲೂಡಿ ಗ್ರಾಮದಲ್ಲಿ ತಾಲ್ಲೂಕು ನಾಯಕ ಸಮುದಾಯದಿಂದ ನಿರ್ಮಿಸಿದ್ದ ರಾಜವೀರ ಮದಕರಿ ನಾಯಕ ವೃತ್ತ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ಸಮಾಜಕ್ಕೂ ಆದರ್ಶಪ್ರಾಯರಾದ ಗುರುಗಳು ಮತ್ತು ಮಾರ್ಗದರ್ಶಕರು ನೆಲೆಸಿದ್ದಾರೆ. ಸಮಾಜದಲ್ಲಿ ಮೌಲ್ಯಗಳು, ಗೌರವ ಹಾಗೂ ಶ್ರೇಷ್ಠತೆ ಹೊಂದಬೇಕಾದರೆ ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕಾಗಿದೆ. ಸರ್ಕಾರ ವಾಲ್ಮೀಕಿ ಸಮುದಾಯದ ಏಳಿಗೆಗಾಗಿ ಸಾಕಷ್ಟು ಯೋಜನೆಗಳಡಿ ಅನುದಾನ ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.
ನಿವೃತ್ತ ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ಬಾಬಣ್ಣ ಮಾತನಾಡಿ, ಸಮುದಾಯವು ತಾಲ್ಲೂಕಿನಲ್ಲಿ ಒಗ್ಗಟ್ಟಿನಿಂದ ಕೂಡಿದ್ದು, ಸಾಕಷ್ಟು ಜನಪರವಾದ ಕಾರ್ಯಗಳಿಗೆ ಸದಾ ಶ್ರಮಿಸುತ್ತಿದೆ. ಯುವಕರು ಉತ್ಸಾಹದಿಂದ ಸ್ವಾವಲಂಬಿಗಳಾಗಿ ಬದುಕುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿನ ಪ್ರತೀ ಕ್ಷೇತ್ರದಲ್ಲೂ ವಿಶಿಷ್ಟ ಸಾಧನೆ ಮಾಡುವ ಮೂಲಕ ಸಮುದಾಯದ ಘನತೆ ಮತ್ತು ಗೌರವ ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖಂಡರಾದ ಗೋಪಾಲಪ್ಪ, ಟಿ.ಕೆ. ವಿಜಯರಾಘವ, ಲೋಕೇಶ್, ಗಂಗಾಧರ್, ರಾಮಕೃಷ್ಣ, ಆದಿನಾರಾಯಣಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.