ಬಾಗೇಪಲ್ಲಿ: ಪಟ್ಟಣದ ಸಂತ ಹಜರತ್ ಷೇಕ್ ಹುಸೇನ್ ಷಾ ವಲಿ ದರ್ಗಾದ ಸಮುದಾಯದ ಭವನದಲ್ಲಿ ಭಾನುವಾರ ಜಮಿಯತ್ ಉಲೇಮಾ ಕರ್ನಾಟಕದ ಪದಾಧಿಕಾರಿಗಳು ಪ್ರತಿಭಾನ್ವಿತ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಸತ್ಕರಿಸಿದರು.
ಘಟಕದ ತಾಲ್ಲೂಕು ಅಧ್ಯಕ್ಷ ಹಾಫೀಸ್ ರಿಜ್ವಾನ್ ಮಾತನಾಡಿ, ಮಕ್ಕಳನ್ನು ಗ್ಯಾರೇಜು, ಮದುವೆಗಳು ಮಾಡಿ ಕಳಿಸದೇ, ಉನ್ನತ ವಿದ್ಯಾಭ್ಯಾಸ ಮಾಡಿಸಬೇಕು. ಉನ್ನತ ಹುದ್ದೆ ಪಡೆದು ಸಮಾಜಕ್ಕೆ ಹಾಗೂ ಸಮುದಾಯಕ್ಕೆ ಸೇವೆ ಮಾಡಬೇಕು ಎಂದು ಕರೆ ನೀಡಿದರು.
ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳಿಗೆ ತೆರಳಿ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಸಂಘಟನೆಯ ಪ್ರಧಾನಕಾರ್ಯದರ್ಶಿ ಮೌಲಾನಾ ರಿಯಾಜುದ್ದೀನ್, ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವು ಅಗತ್ಯ. ಶಿಕ್ಷಣದಿಂದ ಮಾತ್ರ ಬದುಕು ಸುಖಕರ ಆಗಿರುತ್ತದೆ. ಚೆನ್ನಾಗಿ ಓದಬೇಕು. ಅಧ್ಯಯನ ಹಾಗೂ ಸಂಶೋಧನೆಗಳನ್ನು ಹೆಚ್ಚಾಗಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಲೇಮಾ ಸಂಘಟನೆಯ ಖಜಾಂಚಿ ಆದಿಲ್ಖಾನ್, ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷ ಜಬೀವುಲ್ಲಾ, ನಿವೃತ್ತ ಶಿಕ್ಷಕ ಮುನೀರ್ಅಹಮದ್, ಶಿಕ್ಷಣ ಅಧಿಕಾರಿ ರಫೀಕ್ ಅಹಮದ್, ಸಮುದಾಯದ ಕಲೀಮುಲ್ಲಾ, ಜುಬೇರ್, ಆಸೀಫ್, ಮದೀನಾ ಮಸೀದಿ ಅಧ್ಯಕ್ಷ ಜಬೀವುಲ್ಲಾ, ತೌಹಿಕ್ ಮಸೀದಿ ಅಧ್ಯಕ್ಷ ಖಾದಿರ್, ಉಸ್ಮನೀಯ ಮಸೀದಿ ಕಾರ್ಯದರ್ಶಿ ಅಲ್ತಾಫ್, ಅಯಾಜ್, ಕೈಸರ್, ಹಸೀಂ, ನೂರು, ಹಾಫೀಸ್ ಅಬ್ದುಲ್ ಮಜೀದ್ ಇದ್ದರು.
ಅಲ್ಪಂಖ್ಯಾತ ಸಮುದಾಯದ ಬಹುತೇಕರು ಅಕ್ಷರ ಕಲಿತಿಲ್ಲ. ಇಂದಿನ ಮಕ್ಕಳಿಗೆ ಆಸ್ತಿ ಹಣ ಒಡವೆ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಿಮೌಲಾನಾ ರಿಯಾಜುದ್ದೀನ್ ಪ್ರಧಾನ ಕಾರ್ಯದರ್ಶಿ ಜಮಿಯತ್ ಉಲೇಮಾ
ಚಿಕ್ಕ ವಯಸ್ಸಿನಲ್ಲೇ ಮದುವೆ ಬೇಡ
ತಂದೆ–ತಾಯಿ ಮಕ್ಕಳಿಗೆ ಓದಲು ಅವಕಾಶ ಕೊಡಬೇಕು. ಚಿಕ್ಕವಯಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಮದುವೆಗಳು ಮಾಡುವುದು ಬೇಡ. ಗಂಡುಮಕ್ಕಳನ್ನು ಗ್ಯಾರೇಜುಗಳಿಗೆ ಹಾಗೂ ದುಡಿಯಲು ಕಳಿಸದೇ ಉನ್ನತ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಸಂಶೋಧನಾ ವಿದ್ಯಾರ್ಥಿನಿ ನೂರ್ ಬಾನು ಹೇಳಿದರು. ಶಿಕ್ಷಣ ಪಡೆದರೆ ಮಾತ್ರ ಸಮಾಜದಲ್ಲಿ ಗೌರವ ಸಿಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ಅಬ್ದುಲ್ ಕಲಾಂ ಅವರು ಸರ್ಕಾರಿ ಶಾಲೆಗಳಲ್ಲಿ ಓದಿ ಮಹನಿಯರಾಗಿದ್ದಾರೆ. ಮಹನೀಯ ಆದರ್ಶಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.