ADVERTISEMENT

ಬಾಗೇಪಲ್ಲಿ: ಹುಣಸೇ ಚಿಗುರಿಗೆ ಬೇಡಿಕೆ

ಪಿ.ಎಸ್.ರಾಜೇಶ್
Published 2 ಏಪ್ರಿಲ್ 2024, 5:27 IST
Last Updated 2 ಏಪ್ರಿಲ್ 2024, 5:27 IST
ಬಾಗೇಪಲ್ಲಿ ಪಟ್ಟಣದ ಹೊರವಲಯದ ಚಿತ್ರಾವತಿ ಕಣಜದ ಬಳಿ ಇರುವ ಹುಣಸೆ ಮರದಲ್ಲಿ ಬಿಡಿಸಿದ ಹುಣಸೆ ಚಿಗುರು
ಬಾಗೇಪಲ್ಲಿ ಪಟ್ಟಣದ ಹೊರವಲಯದ ಚಿತ್ರಾವತಿ ಕಣಜದ ಬಳಿ ಇರುವ ಹುಣಸೆ ಮರದಲ್ಲಿ ಬಿಡಿಸಿದ ಹುಣಸೆ ಚಿಗುರು   

ಬಾಗೇಪಲ್ಲಿ: ಯುಗಾದಿಯ ಸಂದರ್ಭಕ್ಕೆ ಗಿಡ ಮರಗಳ ಎಲೆಗಳು ಚಿಗುರು ಬಿಡುವ ಸಂಧರ್ಭದಲ್ಲಿ ತಾಲ್ಲೂಕಿನಲ್ಲಿ ಇದೀಗ ಆಲ, ಬೇವು ಸೇರಿದಂತೆ ವಿವಿಧ ಮರಗಳು ಚಿಗುರು ಬಿಡುತ್ತಿವೆ. ಅದರಂತೆ ಹುಣಸೆ ಮರದಲ್ಲಿ ಬಿಡುತ್ತಿರುವ ಚಿಗುರಿಗೆ ಬೇಡಿಕೆ ಹೆಚ್ಚಾಗಿದ್ದು, ಚಿಗುರು ಪ್ರಿಯರಿಗೆ ನೀರೂರಿಸುವಂತೆ ಮಾಡಿದೆ.

ತಾಲ್ಲೂಕಿನ ಯಲ್ಲಂಪಲ್ಲಿ, ಗಂಟ್ಲಮಲ್ಲಮ್ಮ ಕಣಿವೆ, ವಂಡಮಾನ್ ಬ್ಯಾರೇಜು ಸೇರಿದಂತೆ ರಸ್ತೆ ಬದಿಗಳಲ್ಲಿ ಹುಣಸೆ ಮರಗಳು ಹೆಚ್ಚಾಗಿ ಬೆಳೆದಿವೆ. ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಜನರು ರಸ್ತೆ ಬದಿಯಲ್ಲಿ ಪ್ರಯಾಣಿಸುವ ಸಂಧರ್ಭದಲ್ಲಿ ವಾಹನ ನಿಲ್ಲಿಸಿ, ಹುಣಸೆ ಚಿಗುರು ಕೀಳುವುದು ಸಾಮಾನ್ಯವಾಗಿದೆ.

ಗ್ರಾಮೀಣ ಪ್ರದೇಶದ ಮಹಿಳೆಯರು ಹುಣಸೆ ಚಿಗುರು ಬಿಡಿಸಿ ಮಕರಿಗಳಲ್ಲಿ ತುಂಬಿಸಿ ಪಟ್ಟಣಗಳಲ್ಲಿ ಮಾ‌ರಾಟ ಮಾಡುತ್ತಿದ್ದು, ಭರ್ಜರಿ ಸೀಸನ್‌ ವ್ಯಾಪಾರ ನಡೆಸುತ್ತಿದ್ದಾರೆ.

ADVERTISEMENT

‘ನೈಸರ್ಗಿಕವಾಗಿ ಬೆಳೆದ ಹುಣಸೆ ಚಿಗರನ್ನು ಕಿತ್ತು ಮಾರಾಟ ಮಾಡಿ, ಒಂದಿಷ್ಟು ಹಣ ಸಂಪಾದಿಸುತ್ತಿದ್ದೇವೆ. ಚಿಗುರಿಗೆ ಆರ್ಥಿಕ ಮೌಲ್ಯ ಹೆಚ್ಚಾಗಿದೆ. ಕೆಲವರು ಸೊಪ್ಪುಗಳ ಜೊತೆಗೆ ಹುಣಸೆ ಚಿಗುರು ಕೇಳುತ್ತಾರೆ. ಪಟ್ಟಣದವರು ಹುಣಸೆ ಚಿಗುರಿಗಾಗಿಯೇ ಗ್ರಾಮಗಳತ್ತ ಆಗಮಿಸಿ ಹುಣಸೆ ಚಿಗುರು ಖರೀದಿಸುತ್ತಿದ್ದಾರೆ. ಇದರಿಂದ ಪಟ್ಟಣದ ಪ್ರದೇಶಗಳಲ್ಲಿ ಹುಣಸೆ ಚಿಗುರಿಗೆ ಬೇಡಿಕೆ ಹೆಚ್ಚಾಗಿದೆ’ ಎನ್ನುತ್ತಾರೆ ಹುಣಸೆ ಚಿಗುರು ಮಾರಾಟಗಾರ್ತಿ ಲಕ್ಷ್ಮಮ್ಮ.

‘ಚಿಗುರಿನ ಹುಳಿ ತಿಂದವರಿಗೆ ಮಾತ್ರ ಗೊತ್ತು. ಕೆಲವರು ಹುಣಸೆ ಹಣ್ಣಿನ ಬದಲಿಗೆ ಹುಣಸೆ ಚಿಗುರು ಹಾಕಿ ಸಾಂಬರ್‌ ಮಾಡುತ್ತಾರೆ. ಚಿಗುರಿನ ಸಾಂಬರ್ ರುಚಿಯೇ ರುಚಿ’ ಎಂದು ನೀರೂರಿಸುತ್ತಾ ಪಟ್ಟಣದ 7ನೇ ವಾರ್ಡ್‍ನ ನಿವಾಸಿ ಪೋತೇಪಲ್ಲಿ ಶಿವಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.