ADVERTISEMENT

ಮಕ್ಕಳ‌ ಭವಿಷ್ಯಕ್ಕೆ ಪುಸ್ತಕಗಳೇ ಆಧಾರ: ಕೆ. ಕೆಂಪರಾಜು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:13 IST
Last Updated 29 ನವೆಂಬರ್ 2020, 2:13 IST
ಕುದುರೆಬ್ಯಾಲ್ಯ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಕಗಳನ್ನು ವಿತರಿಸಿದ ಜಿ.ಪಂ. ಸದಸ್ಯ ಕೆ. ಕೆಂಪರಾಜು
ಕುದುರೆಬ್ಯಾಲ್ಯ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಕಗಳನ್ನು ವಿತರಿಸಿದ ಜಿ.ಪಂ. ಸದಸ್ಯ ಕೆ. ಕೆಂಪರಾಜು   

ಗೌರಿಬಿದನೂರು: ಗ್ರಾಮೀಣ ಮಕ್ಕಳಲ್ಲಿ ಪಠ್ಯದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ವಿಚಾರಗಳನ್ನು ತಿಳಿಸುವ ಮೂಲಕ ಅವರ ಭವಿಷ್ಯಕ್ಕೆ ಆಸರೆಯಾಗಬೇಕಿದೆ ಎಂದು ಜಿ.ಪಂ. ಸದಸ್ಯ ಕೆ. ಕೆಂಪರಾಜು ತಿಳಿಸಿದರು.

ತಾಲ್ಲೂಕಿನ ಕುದುರೆಬ್ಯಾಲ್ಯ ಗ್ರಾಮದಲ್ಲಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿದರು.

ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಪರಿಣಾಮ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಅವರ ಭವಿಷ್ಯಕ್ಕೆ ಪೂರಕವಾದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪೋಷಕರು ಅವರಿಗೆ ಲ್ಯಾಪ್ ಟಾಪ್ ಮತ್ತು ಟ್ಯಾಬ್ ಕೊಡಿಸಿ ಆನ್‌ಲೈನ್ ಶಿಕ್ಷಣ ಕೊಡಿಸುವಷ್ಟು ಶಕ್ತರಾಗಿಲ್ಲ. ಈ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಠ್ಯದ ವಿಷಯ ಕಲಿಕೆಯ ಜತೆಗೆ ಮುಂದಿನ ಭವಿಷ್ಯಕ್ಕೆ ಆಸರೆಯಾಗಬಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಮಾಹಿತಿ ಒದಗಿಸಲು ಸಹಕಾರಿಯಾಗುವಂತೆ ಉತ್ತಮ ಪುಸ್ತಕಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ADVERTISEMENT

ವಕೀಲ ಎಚ್.ಎಲ್. ವೆಂಕಟೇಶ್ ಮಾತನಾಡಿ, ಸ್ಪರ್ಧಾತ್ಮಕ ಬದುಕಿನಲ್ಲಿ‌ ಮಕ್ಕಳಿಗೆ ಕೇವಲ ತರಗತಿಯ ಕಲಿಕೆ ಹಾಗೂ ಆನ್‌ಲೈನ್ ಕಲಿಕೆಯ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವುದು ಅತ್ಯವಶ್ಯಕವಾಗಿದೆ ಎಂದರು.

ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು. ಇದಕ್ಕೆ ಪೂರಕವಾದ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರೆ ಮುಂದೆ ಐಎಎಸ್ ಮತ್ತು ಕೆಎಎಸ್ ನಂತಹ ಪರೀಕ್ಷೆಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಹೇಳಿದರು.

ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ವಿವಿಧ ಸ್ಥರದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಪುಸ್ತಕಗಳನ್ನು ವಿತರಣೆ ಮಾಡಿದರು.

ಮುಖಂಡರಾದ ನಾಗಪ್ಪ, ಕಿರಣ್, ವೇದಲವೇಣಿ ರಾಮು, ಮುದುಗೆರೆ ರಾಜಶೇಖರ್, ರಾಮಾಂಜಿನಪ್ಪ, ವಿಜಿಕುಮಾರ್, ಗಂಗಾಧರಪ್ಪ, ಲಕ್ಷ್ಮಿನರಸಪ್ಪ, ನರಸಿಂಹಮೂರ್ತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.