ADVERTISEMENT

'ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ'

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 5:08 IST
Last Updated 21 ಏಪ್ರಿಲ್ 2022, 5:08 IST
ಸಭೆಯಲ್ಲಿ ಭಾಗವಹಿಸಿದ್ದ ಕೆ.ಆರ್.ಎಸ್ ಪಕ್ಷದ ಮುಖಂಡರು
ಸಭೆಯಲ್ಲಿ ಭಾಗವಹಿಸಿದ್ದ ಕೆ.ಆರ್.ಎಸ್ ಪಕ್ಷದ ಮುಖಂಡರು   

ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಪದಾಧಿಕಾರಿಗಳ ಸಭೆ ಹಾಗೂ ಕರ್ನಾಟಕ ಚೈತನ್ಯ ಯಾತ್ರೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಂಟಿ ಕಾರ್ಯದರ್ಶಿ ಜಿ.ಎನ್.ರಮೇಶ್ ಮಾತನಾಡಿ, ರಾಜ್ಯದಲ್ಲಿ ಕೆ.ಆರ್.ಎಸ್ ಪಕ್ಷ ಆರಂಭವಾಗಿ ಎರಡೂವರೆ ವರ್ಷ ಕಳೆದಿದೆ. ಇಲ್ಲಿಯವರೆಗೂ ಪಕ್ಷದ ವತಿಯಿಂದ ರಾಜ್ಯದ ವಿವಿಧೆಡೆಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಖಾಸಗೀ ಸ್ಥಳಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲಂಚಾವತಾರ, ಸೇರಿದಂತೆ ಇನ್ನಿತರ ಸಮಾಜಘಾತುಕ ಚಟುವಟಿಕೆಗಳ ವಿರುದ್ಧ ಹೋರಾಟ ನಡೆಸಲಾಗಿದೆ. ರಾಜ್ಯದಲ್ಲಿನ ರಾಷ್ಟ್ರೀಯ ಪಕ್ಷಗಳು ಭ್ರಷ್ಟತೆಯ ಪಕ್ಷಗಳಾಗಿದ್ದು ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳ ವಿರುದ್ಧ ಹೋರಾಟ ಮಾಡಿ ನೊಂದ ಜನತೆಗೆ ನ್ಯಾಯ ಒದಗಿಸುವ ಮೂಲಕ ಸರ್ಕಾರದ ಯೋಜನೆಗಳನ್ನು ಪಾರದರ್ಶಕವಾಗಿ ಸಾಮಾನ್ಯ‌ ಜನತೆಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.

ಪಕ್ಷದ ತತ್ವ ಮತ್ತು ಸಿದ್ಧಾಂತಗಳನ್ನು ರಾಜ್ಯದಾದ್ಯಂತ ಪಸರಿಸುವ ಉದ್ದೇಶದಿಂದ ಏಪ್ರಿಲ್ 24ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಜನಚೈತನ್ಯ ಯಾತ್ರೆಗೆ ಚಾಲನೆ ನೀಡಲಾಗುವುದು. ಈ‌ ಯಾತ್ರೆಯು ಯಲಹಂಕ, ದೊಡ್ಡಬಳ್ಳಾಪುರ ಮೂಲಕ ಅಂದು ಸಂಜೆ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥಕ್ಕೆ ಆಗಮಿಸಲಿದೆ. ನಂತರ 25ರಂದು ಜಲಿಯನ್ ‌ವಾಲಾಬಾಗ್ ಹತ್ಯಾಕಾಂಡದ ಸ್ಮರಣೆಯ ಅಂಗವಾಗಿ ಯೋಧರನ್ನು ಸ್ಮರಿಸಿ ಅವರಿಗೆ ನಮನ ಸಲ್ಲಿಸಿ ಇಲ್ಲಿಂದ ಕೋಲಾರಕ್ಕೆ ತಲುಪಲಿದೆ‌ ಎಂದರು.

ADVERTISEMENT

ರಾಜ್ಯದಲ್ಲಿ ಮುಂಬರುವ 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಪಕ್ಷದ ವತಿಯಿಂದ ಎಲ್ಲ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದರಾಗಿದ್ದೇವೆ. ಈಗಾಗಲೇ 40 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಗುರ್ತಿಸಿ, ಸಂದರ್ಶನ ಮಾಡಿ ಅಂತಿಮಗೊಳಿಸಲಾಗಿದೆ. ನಮ್ಮ ಪಕ್ಷಕ್ಕೆ ಯುವಶಕ್ತಿ‌ ಹಾಗೂ ನಾಗರೀಕರ ಪ್ರೋತ್ಸಾಹವೇ ಪ್ರೇರಣೆಯಾಗಿದ್ದು ಇವರನ್ನು ಬಲವರ್ಧನೆಗೊಳಿಸುವ ಮೂಲಕ ಪಕ್ಷವನ್ನು ಸದೃಢಗೊಳಿಸಲು ‌ಮುಂದಾಗಿದ್ದೇವೆ ಎಂದು ಹೇಳಿದರು.

ಮುಖಂಡ ಸೊಣ್ಣಪ್ಪಗೌಡ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಅಸ್ಮಿತೆಯನ್ನು ಅನುಷ್ಟಾನಗೊಳಿಸಿ ಜನತೆಗೆ ನ್ಯಾಯಯುತವಾದ ಸೌಲಭ್ಯವನ್ನು ‌ಕಲ್ಪಿಸಿ ನೆಮ್ಮದಿಯ ಬದುಕಿಗೆ ಸಹಕಾರಿಯಾಗುತ್ತೇವೆ. ಸರ್ಕಾರವು ಸಾರ್ವಜನಿಕರಿಂದ ಸಂಗ್ರಹ ಮಾಡುವ ತೆರಿಗೆ ಹಣವು ಸಮರ್ಪಕವಾಗಿ ಬಳಕೆಯಾಗುವಂತೆ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಮುಂದಾಗುತ್ತೇವೆ ಎಂದು‌ ಹೇಳಿದರು.

ಪಕ್ಷದ ಸಂಘಟನಾ ಉಸ್ತುವಾರಿ ಮೌಲಾಸಾಬ್, ಜಿಲ್ಲಾಧ್ಯಕ್ಷ ರಂಜಾನ್ ಸಾಬ್, ಮುಖಂಡ ರಾಜಗೋಪಾಲ್, ರಾಜಕುಮಾರ್ ನಾಯಕ್, ರವಿಕುಮಾರ್, ಶಾಂತಕುಮಾರ್, ಕೃಷ್ಣಪ್ಪ, ರಾಮಾಂಜಿನಯ್ಯ, ಬಾಬಾಜಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.