ADVERTISEMENT

ಆಂಧ್ರಕ್ಕೆ ಬಸ್ ಸಂಚಾರ ಹೆಚ್ಚಿಸಲು ಆಗ್ರಹ

ಆಂದ್ರಪ್ರದೇಶದ ಮದನಪಲ್ಲಿ, ತಿರುಪತಿ, ಕಡಪಾಗೆ ಬಸ್ ನಿಯೋಜನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 15:04 IST
Last Updated 27 ಏಪ್ರಿಲ್ 2025, 15:04 IST
ಆಂಧ್ರಪ್ರದೇಶದಿಂದ ಚಿಂತಾಮಣಿ–ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ ಗಳಿಗೆ ಪ್ರಯಾಣಿಕರ ಪರದಾಟ
ಆಂಧ್ರಪ್ರದೇಶದಿಂದ ಚಿಂತಾಮಣಿ–ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ ಗಳಿಗೆ ಪ್ರಯಾಣಿಕರ ಪರದಾಟ   

ಪ್ರಜಾವಾಣಿ ವಾರ್ತೆ

ಚಿಂತಾಮಣಿ: ಬೆಂಗಳೂರಿನಿಂದ ಚಿಂತಾಮಣಿ ಮೂಲಕ ಮದನಪಲ್ಲಿ, ತಿರುಪತಿ, ಕಡಪಾ, ರಾಯಚೂಟಿ ಕಡೆಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಸಂಖ್ಯೆ ಕಡಿಮೆ ಇದೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದ್ದು, ಬಸ್ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಆಂಧ್ರಪ್ರದೇಶದ ಕಡಪಾ ಮತ್ತು ತಿರುಪತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಕನ್ನಡಿಗರು ವಾಸವಾಗಿದ್ದಾರೆ. ರಾಯಚೂಟಿಯ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಹೆಚ್ಚಿನ ಜನರು ತೆರಳುತ್ತಾರೆ. ಪ್ರತಿನಿತ್ಯ, ವಾರಾಂತ್ಯ ಹಾಗೂ ಉತ್ಸವ ಸಂದರ್ಭಗಳಲ್ಲಿ ನಿಯಮಿತ ಬಸ್ ಇಲ್ಲದೆ ನಗರದ ಜತೆಗೆ ಪ್ರಯಾಣಿಕರು ಪರದಾಡುವಂತಾಗಿದೆ.

ADVERTISEMENT

ಮದನಪಲ್ಲಿ, ತಿರುಪತಿ, ಕಡಪಾಗೆ ಹೋಗಲು ಹೆಚ್ಚಿನ ಬಸ್‌ಗಳ ಅವಶ್ಯಕತೆ ಇದೆ. ಪ್ರತಿದಿನ ಮುಂಜಾನೆ ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳನ್ನು ಓಡಿಸಬೇಕು. ಅಂತರರಾಜ್ಯ ಪರವಾನಗಿ ಇಲ್ಲದೆ ಸಂಚರಿಸುತ್ತಿರುವ ಖಾಸಗಿ ಬಸ್‌ಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿರುವ ಪ್ರಯಾಣಿಕರು, ಪರವಾನಗಿ ಇಲ್ಲದೆ ಖಾಸಗಿ ಬಸ್‌ಗಳು ಸಂಚರಿಸುವುದಲ್ಲದೆ, ಒಂದೇ ಪರವಾನಗಿಯಲ್ಲಿ ನಾಲ್ಕೈದು ಬಸ್ ಓಡಿಸಲಾಗುತ್ತಿದೆ ಎಂದು ದೂರಿದ್ದಾರೆ.

ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಆಂತರರಾಜ್ಯ ಬಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

Cut-off box - ಕಾರ್ಯರೂಪಕ್ಕೆ ಬಾರದ ಒಪ್ಪಂದ ಈ ಹಿಂದೆಯೂ ಅನೇಕ ಬಾರಿ ಪ್ರಯಾಣಿಕರು ಆಂಧ್ರಪ್ರದೇಶಕ್ಕೆ ಹೆಚ್ಚಿನ ಬಸ್‌ ನಿಯೋಜಿಸಬೇಕೆಂದು ಮನವಿ ಸಲ್ಲಿಸಿದ್ದರು. ಎರಡು ರಾಜ್ಯಗಳ ಅಧಿಕಾರಿಗಳ ನಡುವೆ ಹೆಚ್ಚಿನ ಬಸ್ ಸಂಚಾರಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಪ್ರಯಾಣಿಕ ಕೆ.ವೆಂಕಟೇಶ್ ಅಸಮದಾನ ವ್ಯಕ್ತಪಡಿಸಿದರು. ನಗರ ಬಸ್‌ ನಿಲ್ದಾಣ ಮೂಲಕ ಸಂಚರಿಸಿ ಬೆಂಗಳೂರಿನಿಂದ ಬರುವ ಕೆಲವು ಬಸ್ ಚಿಂತಾಮಣಿ ನಗರಕ್ಕೆ ಬಾರದೆ ಬೈ-ಪಾಸ್‌ನಲ್ಲೇ ಸಂಚರಿಸುತ್ತವೆ. ಬಸ್‌ಗಳು ನಗರದ ಬಸ್ ನಿಲ್ದಾಣಕ್ಕೆ ಬಾರದೆ ಬೈ-ಪಾಸ್ ಮೂಲಕ ಸಂಚರಿಸುತ್ತವೆ. ಬೆಂಗಳೂರಿನಿಂದ ಮದನಪಲ್ಲಿ ತಿರುಪತಿ ಕಡಪಾ ರಾಯಚೂಟಿ ಕಡೆಗೆ ಸಂಚರಿಸುವ ಎಲ್ಲ ಬಸ್‌ಗಳು ನಗರದ ಬಸ್ ನಿಲ್ದಾಣದ ಮೂಲಕವೇ ಸಂಚರಿಸಬೇಕು ಎಂದು ಪ್ರಯಾಣಿಕರು ಒತ್ತಾಯಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.