ಬಾಗೇಪಲ್ಲಿ: ತಾಲ್ಲೂಕಿನ ಕಸಬಾ ಹೋಬಳಿಯ ದೇವರಗುಡಿಪಲ್ಲಿ ಹಾಗೂ ಗೂಳೂರು ಹೋಬಳಿಯ ಸದ್ದಪಲ್ಲಿ ತಾಂಡ, ಪಾರ್ವತಿಪುರ ತಾಂಡಗಳಲ್ಲಿ ಜಲಶಕ್ತಿ ಅಭಿಯಾನದಡಿ ನಡೆಯುತ್ತಿರುವ ಕಾಮಗಾರಿಗಳನ್ನು ಅಭಿಯಾನದ ನೋಡಲ್ ಅಧಿಕಾರಿ, ವಸತಿ ಮತ್ತು ನಗರ ಪ್ರದೇಶಗಳ ಕೇಂದ್ರ ಸಚಿವಾಲಯದ ಉಪಕಾರ್ಯದರ್ಶಿ ಮಂಜೇಶ್ ಪೋರ್ವಲ್ ಮತ್ತು ಅಧಿಕಾರಿಗಳು ಪರಿಶೀಲನೆ ಮಾಡಿದರು.
ಈ ವೇಳೆ ಮಾತನಾಡಿದ ಮಂಜೇಶ್ ಪೋರ್ವಲ್, ಜೆಜೆಎಂ ಯೋಜನೆಯಡಿ ಸರಬರಾಜು ಆಗುವ ನೀರಿನ ಗುಣಮಟ್ಟವನ್ನು ಪರಿಶೀಲನೆ ಮಾಡಿದರು. ಗ್ರಾಮಗಳಲ್ಲಿರುವ ನೀರಿನ ಟ್ಯಾಂಕ್ಗಳನ್ನು ಆಗಾಗ್ಗೆ ಸ್ವಚ್ಛತೆ ಮಾಡಬೇಕು. ಸ್ವಚ್ಛ ಮಾಡಿದ ದಿನಾಂಕವನ್ನು ಗೋಡೆಗಳ ಮೇಲೆ ಕಡ್ಡಾಯವಾಗಿ ಬರೆದಿರಬೇಕು ಎಂದು ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆ ಒಂದಾಗಿದೆ. ಗ್ರಾಮಗಳ ಕಟ್ಟ ಕಡೆಯ ಜನರಿಗೆ ಕುಡಿಯುವ ನೀರು ಹರಿಸುವ ಉದ್ದೇಶ ಹೊಂದಿದೆ ಎಂದರು.
ತಾಲ್ಲೂಕಿನ ಸದ್ದಪಲ್ಲಿ ತಾಂಡದಲ್ಲಿ ಜೆಜೆಎಂ ಯೋಜನೆಯ ಅಡಿಯಲ್ಲಿ ಮನೆಗಳಿಗೆ ಸರಬರಾಜು ಆಗುವ ನೀರಿನ ಮಟ್ಟ ಪರಿಶೀಲನೆ ಮಾಡಿದರು. ಕುಡಿಯಲು ನೀರು ಯೋಗ್ಯತೆ ಇದೆಯೇ? ಇಲ್ಲವೇ?, ಕಾಲಕಾಲಕ್ಕೆ ನೀರು ಸರಬರಾಜು ಮಾಡುತ್ತಿರುವ ಹಾಗೂ ಸ್ವಚ್ಛತೆಯ ಬಗ್ಗೆ ಗ್ರಾಮಸ್ಥರಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಪಾರ್ವತಿಪುರ ತಾಂಡದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಕೇಂದ್ರ ತಂಡ, ಪ್ರತಿನಿತ್ಯ ಜೆಜೆಎಂ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ಅಂಗನವಾಡಿ ಶಿಕ್ಷಕಿಯರಿಂದ ಮಾಹಿತಿ ಸಂಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತೀಕ್ಭಾಷ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ರಮೇಶ್, ಜಿಲ್ಲಾ ಪಂಚಾಯತ್ ತಾಂತ್ರಿಕ ಇಲಾಖೆಯ ಎಇಇ ಮಹೇಶ್, ಗೂಳೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.