ADVERTISEMENT

ಚಿಕ್ಕಬಳ್ಳಾಪುರ: MC ಸುಧಾಕರ್ vs K ಸುಧಾಕರ- ತಾರಕಕ್ಕೇರಿದ ಭ್ರಷ್ಟಾಚಾರದ ವಾಕ್ಸಮರ

ಸಂಸದರ ವಿರುದ್ಧ ಸಚಿವ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 13:38 IST
Last Updated 26 ಜನವರಿ 2025, 13:38 IST
<div class="paragraphs"><p>K ಸುಧಾಕರ,&nbsp;MC ಸುಧಾಕರ್</p></div>

K ಸುಧಾಕರ, MC ಸುಧಾಕರ್

   

ಚಿಕ್ಕಬಳ್ಳಾಪುರ: ‘ಭ್ರಷ್ಟಾಚಾರ’ ಕುರಿತು ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಸಂಸದ ಡಾ.ಕೆ.ಸುಧಾಕರ್ ನಡುವಿನ ವಾಕ್ಸಮರ ತಾರಕಕ್ಕೇರಿದೆ.  

‘ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಎಲ್ಲ ಇಲಾಖೆಗಳಲ್ಲಿಯೂ ಸಚಿವರ ಏಜೆಂಟರು ಇದ್ದಾರೆ. ಅವರ ಬಾವ, ಬಾಮೈದ, ಅಣ್ಣ, ತಮ್ಮ ಹೀಗೆ ಸಂಬಂಧಿಕರೇ ಏಜೆಂಟರಾಗಿದ್ದಾರೆ’ ಎಂದು ಸಂಸದ ಡಾ.ಕೆ.ಸುಧಾಕರ್ ಇತ್ತೀಚೆಗೆ ಆರೋಪಿಸಿದ್ದರು. 

ADVERTISEMENT

ಇದಕ್ಕೆ ಭಾನುವಾರ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್, ‘ಡಾ.ಕೆ.ಸುಧಾಕರ್‌ಗೆ ಸಂಸದರಾಗಿ ಆಯ್ಕೆಯಾಗಿರುವ ಕುರಿತು ತೃಪ್ತಿ ಇಲ್ಲ. ಜಿಲ್ಲೆಯ ಮೇಲಿನ ನನ್ನ ಹಿಡಿತ ತಪ್ಪಿತು. ಬರಬೇಕಾದ ವರಮಾನ ಇಲ್ಲದಾಯಿತು ಎಂದು ಮಾನಸಿಕ ಅಸ್ವಸ್ಥರ ರೀತಿ ವರ್ತಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

ಕಂಪನಿಗಳನ್ನು ಮಾಡಿಕೊಂಡು ಲೂಟಿ ಸಂಸ್ಕೃತಿ ಹುಟ್ಟು ಹಾಕಿದ್ದು ಯಾರು? ಸ್ವಂತ ಕಂಪನಿಗಳಿಗೆ ಗುತ್ತಿಗೆ ನೀಡಿದ್ದು ಯಾರು ಎನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ. ಈ ಹಿಂದೆ ಅವರು ಸಚಿವರಾಗಿದ್ದ ವೇಳೆ ಯಾವ ವ್ಯವಸ್ಥೆ ಇತ್ತು. ಈಗ ಯಾವ ರೀತಿ ವ್ಯವಸ್ಥೆ ಇದೆ ಎನ್ನುವ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಕೇಳಿದರೆ ಗೊತ್ತಾಗುತ್ತದೆ ಎಂದರು.

ಚಿಕ್ಕಬಳ್ಳಾಪುರ ಉತ್ಸವ, ಶಿವೋತ್ಸವಕ್ಕೆ ಯಾರಿಂದ ಎಷ್ಟು ವಸೂಲಿ ಮಾಡಿದರು? ಗುತ್ತಿಗೆ ಕಾಮಗಾರಿಗಳಲ್ಲಿ ಎಲ್ಲಿ ವಸೂಲಿ ಮಾಡಿದರು ಎನ್ನುವ ಬಗ್ಗೆ ಮಾಹಿತಿ ಇದೆ. ಕಾಮಾಲೆ ರೋಗ ಬಂದವರಿಗೆ ಪ್ರಪಂಚವೇ ಹಳದಿ ಎನ್ನುವಂತೆ ಇವರ ಮನಸ್ಥಿತಿ ಇದೆ ಎಂದು ಟೀಕಿಸಿದರು.

ಈ 20 ತಿಂಗಳಲ್ಲಿ ನನ್ನ ಕಾರ್ಯವೈಖರಿ ಯಾವ ರೀತಿ ಎನ್ನುವುದು ನಿಮಗೆ (ಮಾಧ್ಯಮ) ಸೇರಿದಂತೆ ಎಲ್ಲರಿಗೂ ಗೊತ್ತು. ನಮ್ಮದು ಅವರ ರೀತಿ ಸಂಸ್ಕೃತಿಯಲ್ಲ. ಕೋವಿಡ್ ವೇಳೆ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದಾರೆ. ಡಾ.ಕೆ.ಸುಧಾಕರ್ ಸಚಿವರಾಗಿದ್ದ ವೇಳೆ ವೈದ್ಯಕೀಯ ಶಿಕ್ಷಣ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕದ ವೇಳೆಯಲ್ಲಿ ಎಷ್ಟು ಹಣ ಪಡೆದರು, ವರ್ಗಾವಣೆಗೆ ಎಷ್ಟು ಹಣ ನಿಗದಿ ಮಾಡಿದ್ದರು ಎನ್ನುವುದು ತಿಳಿದಿದೆ ಎಂದು ಹೇಳಿದರು.

ಭವಿಷ್ಯದ ಮುಖ್ಯಮಂತ್ರಿ  ಎನ್ನುವ ಕನಸು ಸಹ ಕಂಡಿದ್ದರು. ಈಗ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರ ಬಗ್ಗೆ ಕನಿಕರವೂ ಇದೆ ಎಂದರು.

**

‘ಶಾಸಕರು ಪ್ರತಿಕ್ರಿಯಿಸುವರು’

ಹೊಸ ವರ್ಷದ ಉಡುಗೊರೆ ಹೆಸರಿನಲ್ಲಿ ಶಾಸಕ ಪ್ರದೀಪ್ ಈಶ್ವರ್ ಗಣಿಗಳು ಮತ್ತು ಕ್ರಷರ್‌ಗಳಿಂದ ತಲಾ ₹ 10 ಲಕ್ಷದಂತೆ ₹ 12 ಕೋಟಿ ಪಡೆದಿದ್ದಾರೆ ಎಂದು ಡಾ.ಕೆ.ಸುಧಾಕರ್ ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಡಾ.ಎಂ.ಸಿ.ಸುಧಾಕರ್, ‘ಈ ಬಗ್ಗೆ ಶಾಸಕರು ಪ್ರತಿಕ್ರಿಯಿಸುವರು’ ಎಂದು ಹೇಳಿದರು.

ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ರಿಪಬ್ಲಿಕ್ ಬಗ್ಗೆ ನಾನು ಧ್ವನಿ ಎತ್ತಿದ್ದೇನೆ. ಡಾ.ಕೆ.ಸುಧಾಕರ್ ಸಹ ಕ್ರಷರ್ ಮಾಲೀಕರು. ನನ್ನ ಮೇಲೆ ಇಂತಹ ಮಾತುಗಳು ಬಂದರೆ ನಾನು ಎಲ್ಲಿ ಬೇಕಾದರೂ ಎದೆ ಮುಟ್ಟಿಕೊಂಡು ಮಾತನಾಡುತ್ತೇನೆ ಎಂದರು. 

ಇದು ಶಾಸಕರು ಮತ್ತು ಸಂಸದರ ವೈಯಕ್ತಿಕ ವಿಚಾರ. ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೇನೆ. ಅವರು ಉತ್ತರ ಕೊಡುತ್ತೇನೆ ಎಂದಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.