ಬಾಗೇಪಲ್ಲಿ: ಪಟ್ಟಣದ ಪಿಎಂಶ್ರೀ ಬಾಲಕಿಯರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಮುನಿಕೆಂಪೇಗೌಡ ಭೇಟಿ ನೀಡಿದರು. ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ಜೊತೆಗೆ ಹೂವು, ಸಿಹಿ ನೀಡಿ ಸ್ವಾಗತಿಸಲಾಯಿತು.
ಮುನಿಕೆಂಪೇಗೌಡ ಮಾತನಾಡಿ, ಶಿಕ್ಷಣದಿಂದ ಯಾವ ಮಗುವು ವಂಚಿತರಾಗಬಾರದು. ಎಲ್ಲಾ ಗ್ರಾಮಗಳಲ್ಲಿ ಶಿಕ್ಷಕ, ಶಿಕ್ಷಕಿಯರು ದಾಖಲಾತಿ ಆಂದೋಲನ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಪಠ್ಯ ಶಿಕ್ಷಣ ಬೋಧಿಸಬೇಕು. ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು. ಮಕ್ಕಳ ಶಿಕ್ಷಣದ ಮಟ್ಟವನ್ನು ತಿಳಿಯಲು ಶಾಲೆಗಳಿಗೆ ಪೋಷಕರು ಭೇಟಿ ನೀಡಬೇಕು ಎಂದರು.
ಮುಖ್ಯಶಿಕ್ಷಕ ಆರ್.ಹನುಮಂತರೆಡ್ಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದಲ್ಲಿ ಪಿಎಂಶ್ರೀ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕ್ಷಕ, ಶಿಕ್ಷಕಿಯರು ಬೋಧಿಸುತ್ತಾರೆ. ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎಂದು ತಿಳಿಸಿದರು.
ಶಾಲಾ ಕೊಠಡಿ, ಆವರಣ ಸಿಂಗರಿಸಿ, ಮಕ್ಕಳಿಗೆ ಸ್ವಾಗತ: ಪಟ್ಟಣದ ಪಿಎಂ ಶ್ರೀ ಬಾಲಕಿಯರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯದ್ವಾರದಲ್ಲಿ ಮಕ್ಕಳು ಸರತಿಸಾಲಿನಲ್ಲಿ ನಿಂತಿದ್ದರು. ಶಾಲಾ ಶಿಕ್ಷಕ, ಶಿಕ್ಷಕಿಯರು ಮಕ್ಕಳಿಗೆ ಗುಲಾಬಿ ನೀಡಿ ಸ್ವಾಗತಿಸಿದರು. ಶಾಲಾ ಕೊಠಡಿ, ಆವರಣಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲಾ ಪ್ರಾರಂಭದ ದಿನ ಮಕ್ಕಳಿಗೆ ಪಾಯಸ, ಸಿಹಿಊಟ ವಿತರಿಸಲಾಯಿತು.
ಶಿಕ್ಷಣ ಅಧಿಕಾರಿ ಎನ್.ಶಿವಪ್ಪ, ಪದ್ಮಾವತಿ, ವಿ.ಮುನಿರಾಜು, ಗಂಗಾಧರ, ಕುಶಲ್ಕುಮಾರ್, ಶಿಕ್ಷಕ ವೈ.ಎಂ.ಮಂಜುನಾಥರೆಡ್ಡಿ, ನರಸಿಂಹಮೂರ್ತಿ, ಶಿಕ್ಷಕಿ ಪ್ರಭಾವತಿ, ಧರ್ಮಪುತ್ರಿ, ಬೇಬಿಮಮತಾಜ್, ಭಾರ್ಗವಿ, ರಜಿವಿ, ಕವಿತ, ಉಷಾ, ಪದ್ಮಜ, ರಾಧಿಕಾ, ಶ್ರೀಲೇಖ, ಕಲ್ಪನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.