ADVERTISEMENT

ಚಿಕ್ಕಬಳ್ಳಾಪುರ: ಕಳವಳ ಹುಟ್ಟಿಸಿದ ಕಾಲುವೆ ಗುರುತು

ಕೆಳಗಿನತೋಟದ ವಿನಾಯಕ ಬಡಾವಣೆ ಮಧ್ಯ ಕಾಲುವೆ ತೋಡಲು ಮುಂದಾದ ಅಧಿಕಾರಿಗಳು, ಭಯದಲ್ಲಿ ನಾಗರಿಕರು

ಈರಪ್ಪ ಹಳಕಟ್ಟಿ
Published 9 ಮೇ 2020, 2:14 IST
Last Updated 9 ಮೇ 2020, 2:14 IST
ಪ್ರಸ್ತುತ ವಿನಾಯಕ ಬಡಾವಣೆ ಇರುವ ಪ್ರದೇಶ 2003ರಲ್ಲಿ ಇದ್ದ ಚಿತ್ರವಿದು.
ಪ್ರಸ್ತುತ ವಿನಾಯಕ ಬಡಾವಣೆ ಇರುವ ಪ್ರದೇಶ 2003ರಲ್ಲಿ ಇದ್ದ ಚಿತ್ರವಿದು.   

ಚಿಕ್ಕಬಳ್ಳಾಪುರ: ಹೆಬ್ಬಾಳ ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರಿನಿಂದ ಜಿಲ್ಲೆಯ ಕೆರೆಗಳ ತುಂಬುವ ಯೋಜನೆ ಅಡಿ ನಗರದಲ್ಲಿ ಕೈಗೆತ್ತಿಕೊಂಡಿರುವ ಕೆರೆ ಸಂಪರ್ಕ ಕಾಲುವೆಗಳ ಸಜ್ಜುಗೊಳಿಸುವ ಕಾಮಗಾರಿ ಕೆಳಗಿನತೋಟ ಪ್ರದೇಶದ ಬಡಾವಣೆಯೊಂದರ ನಿವಾಸಿಗಳಲ್ಲಿ ಆತಂಕ ತಂದಿಟ್ಟಿದೆ.

ಕೆಳಗಿನತೋಟ ಪ್ರದೇಶಕ್ಕೆ ಹೊಂದಿಕೊಂಡಂತೆ ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ವಿನಾಯಕ ಬಡಾವಣೆಯ ನಡುವೆಯೇ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲದೇ ಇರುವ ಕಾಲುವೆ ತೋಡಲು ಮುಂದಾಗಿರುವ ಆರೋಪ ಕೇಳಿಬಂದಿದ್ದು, ಇದರಿಂದ ಸಾಲಮಾಡಿ ಮನೆ ಕಟ್ಟಿದವರು, ಕಷ್ಟಪಟ್ಟು ನಿವೇಶನ ಖರೀದಿಸಿದವರು ಚಿಂತೆಗೀಡಾಗಿದ್ದಾರೆ.

ಏನಿದು ಪ್ರಕರಣ?

ADVERTISEMENT

ಇಲ್ಲಿನ ಸರ್ವೇ ನಂಬರ್ 227 ರಲ್ಲಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ ಬೆಂಗಳೂರು ಮೂಲದ ರಿಯಲ್‌ ಎಸ್ಟೆಟ್‌ ಉದ್ಯಮಿಯೊಬ್ಬ ಆರೇಳು ವರ್ಷಗಳ ಹಿಂದೆ ವಿನಾಯಕ ಬಡಾವಣೆ ನಿರ್ಮಿಸಿ ಎಲ್ಲ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ.

ಬಡಾವಣೆಯಲ್ಲಿ ಈಗಾಗಲೇ ಸಾಕಷ್ಟು ಮನೆಗಳು ಕೂಡ ನಿರ್ಮಾಣವಾಗಿವೆ. ಇದೀಗ ಎಚ್‌.ಎನ್ ವ್ಯಾಲಿ ಯೋಜನೆ ಅಡಿ ನೀರು ತುಂಬುತ್ತಿರುವ ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ಸಂಪರ್ಕಿಸುವ ಕಾಲುವೆಯನ್ನು ಸುಸಜ್ಜಿತಗೊಳಿಸುವ ಕಾಮಗಾರಿ ಬಡಾವಣೆಯ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆದಿರುವ ’ಮಾಸ್ಟರ್‌ ಫ್ಲ್ಯಾನ್‌‘ನಲ್ಲಿ ವಿನಾಯಕ ಬಡಾವಣೆಯ ಎರಡು ಅಂಚಿನಲ್ಲಿ ಕಾಲುವೆಗಳು ಇರುವುದು ಸಷ್ಟವಾಗಿ ಗೋಚರಿಸುತ್ತದೆ.

ಆದರೆ, ಕಂದಾಯ ಇಲಾಖೆ ಅಧಿಕಾರಿಗಳು ಕೆರೆಯ ಸಂಪರ್ಕ ಕಾಲುವೆ ಅತಿಕ್ರಮಿಸಿ ಬಡಾವಣೆ ನಿರ್ಮಿಸಲಾಗಿದೆ ಎಂದು ಬಡಾವಣೆ ನಡುವೆಯೇ ಕಾಲುವೆ ತೋಡಲು ಗುರುತು ಮಾಡಿ ಹೋಗಿರುವುದು ಸ್ಥಳೀಯ ನಿವಾಸಿಗಳಿಗೆ ಬರಸಿಡಿಲು ಬಡಿದಂತಾಗಿದೆ.

ಪ್ರಸ್ತುತ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಹಿಟಾಚಿ ಯಂತ್ರದಿಂದ ಕಾಲುವೆ ತೋಡುತ್ತ ಬಡಾವಣೆ ಸಮೀಪಿಸುತ್ತಿರುವುದು ಸ್ಥಳೀಯರ ಎದೆ ಬಡಿತ ಹೆಚ್ಚಿದೆ.

’ಲಕ್ಷಗಟ್ಟಲೇ ಸಾಲ ಮಾಡಿ ನಿವೇಶನ ತೆಗೆದು, ಮನೆ ಕಟ್ಟಿಕೊಂಡವರು ಕಾಲುವೆಗೆ ಮಾಡಿರುವ ಗುರುತು ಕಂಡು ಭಯಗೊಂಡಿದ್ದಾರೆ. ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಬಂದು ಜಂಟಿ ಸಮೀಕ್ಷೆ ನಡೆಸಿ ಸ್ಥಳೀಯರಿಗೆ ನ್ಯಾಯ ಕೊಡಿಸಬೇಕು‘ ಎಂದು ಸ್ಥಳೀಯ ನಿವಾಸಿ ಶಿವಾನಂದ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.