ಚಿಕ್ಕಬಳ್ಳಾಪುರ: ‘ನಮಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪಂದಿಸುತ್ತಾರೋ ಇಲ್ಲವೋ ಗೊತ್ತಿಲ್ಲ, ನಮ್ಮ ಮಂತ್ರಿಗಳು ಸ್ಪಂದಿಸಿದರೆ ಸಾಕಾಗಿದೆ. ನಮ್ಮ ಕಾಂಗ್ರೆಸ್ನಿಂದ ಮಂತ್ರಿಗಳಾದವರು ಸ್ಪಂದಿಸಿದರೆ ಪಕ್ಷ ಸಂಘಟನೆ ಮತ್ತಷ್ಟು ಉತ್ತಮಗೊಳ್ಳುವ ಜತೆಗೆ ಅಭಿವೃದ್ಧಿ ಸಹ ಆಗುತ್ತದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಚಿವ ಸ್ಥಾನಕ್ಕೆ ಲಾಬಿ ಮಾಡುವುದಿಲ್ಲ. ಅರ್ಹತೆ, ಸಾಮರ್ಥ್ಯದ ಮೇಲೆ ಸಿಗಲಿ. ಆದರೆ ಇವತ್ತಿನ ರಾಜಕೀಯ ಸನ್ನಿವೇಶದಲ್ಲಿ ಜಾತಿ, ಜಿಲ್ಲೆ ಲೆಕ್ಕಾಚಾರದ ಅಳತೆಗೋಲು ಇಟ್ಟುಕೊಂಡು ಇವತ್ತಿನ ಮಂತ್ರಿಗಳನ್ನು ಮಾಡಲಾಗುತ್ತಿದೆ. ಹೀಗಾಗಿ ಅರ್ಹತೆ, ಸಾಮರ್ಥ್ಯ ಹಿನ್ನೆಲೆಗೆ ಸರಿದಿವೆ’ ಎಂದು ತಿಳಿಸಿದರು.
‘ಬಿಜೆಪಿಯ ಯಾವ ಮುಖಂಡರು ನನ್ನನ್ನು ಈವರೆಗೆ ಸಂಪರ್ಕಿಸಿಲ್ಲ. ಜಾರಕಿಹೊಳಿ ಸಹೋದರರು ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರಾಗಿದ್ದಾರೆ. ಅವರಿಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಜಿಲ್ಲೆಯ ಒಳಗಿನ ಸನ್ನಿವೇಶ ಅವರಿಗೆ ನೋವು ತಂದಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿದರೆ ಪರಿಹಾರ ಸಿಗುತ್ತದೆ ಎಂದು ಭಾವಿಸಿಕೊಂಡಿರುವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.