ಚೇಳೂರು: ಗೆರಿಗಿರೆಡ್ಡಿಪಾಳ್ಯ ಗ್ರಾಮದಲ್ಲಿ ಚರಂಡಿ ನೀರು ಇಳಿಜಾರು ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಕೊಳಚೆ ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ.
ಗ್ರಾಮದಲ್ಲಿ ಮೂಲ ಸೌಕರ್ಯ ಇಲ್ಲ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಸ್ಪಂದಿಸುತ್ತಿಲ್ಲ. ಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದೆ. ಚರಂಡಿ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು
ಇರುವಂತಾಗಿದೆ.
ಗ್ರಾಮದಲ್ಲಿ ಸಿಸಿ ರಸ್ತೆಗೆ ಎರಡು ಬದಿಯಲ್ಲೂ ಚರಂಡಿ ವ್ಯವಸ್ಥೆ ಮಾಡಿಲ್ಲ. ಗ್ರಾಮದ ಮನೆಗಳ ಕೊಳಚೆ ನೀರು ನೇರವಾಗಿ ಬೀದಿಗೆ ಬಿಟ್ಟಿದ್ದಾರೆ. ಈ ಚಿಕ್ಕ ಗ್ರಾಮದಲ್ಲಿ ಎಲ್ಲ ಸಿಸಿ ರಸ್ತೆ ಬದಿಯಲ್ಲೂ ಹೂಳು ತುಂಬಿ ಮಾಲಿನ್ಯ ನೀರು ರಸ್ತೆ ಮೇಲೆ ಹರಿಯುತ್ತಿದೆ.
ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತಿರುವುದನ್ನು ಸಂಬಂಧಿಸಿದವರಿಗೆ ಹೇಳಿದ್ದೇವೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ಶೀಘ್ರದಲ್ಲೇ ಚರಂಡಿ ಕಾಮಗಾರಿ ಮಾಡಿಸುತ್ತೇವೆ ಎಂದಿದ್ದಾರೆ. ಅವರು ಮಾಡಿಕೊಡುವಲ್ಲಿಯವರೆಗೆ ದುರ್ವಾಸನೆ, ಸೊಳ್ಳೆಗಳ ತಾಣದಲ್ಲಿ ವಾಸಿಸುವುದಾದಾರೂ ಹೇಗೆ ಎನ್ನುತ್ತಾರೆ
ಗ್ರಾಮದ ನಿವಾಸಿ ಮಧು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.