ಗುಡಿಬಂಡೆ: ‘ರೈತರ ನಿರಂತರ ಬೇಡಿಕೆಯಿಂದ ಮೊದಲ ಬಾರಿಗೆ ತಾಲ್ಲೂಕು ಕೇಂದ್ರದಲ್ಲಿ ರಾಗಿ ಖರೀದಿಗೆ ನಿರ್ಧರಿಸಿ ಖರೀದಿ ಕೇಂದ್ರ ತೆರೆಯಲಾಗಿದೆ. ಪ್ರತಿ ರೈತರಿಗೆ ಸಿಗಬೇಕಾದ ಬೆಂಬಲ ಬೆಲೆಯಲ್ಲಿ ಸಣ್ಣ ರೈತರಿಗೆ ಸೌಲಭ್ಯ ನೀಡಿ ದೊಡ್ಡರೈತರು ಬೆಂಬಲಬೆಲೆಯಿಂದ ವಂಚಿತರಾಗಿದ್ದು ಇದನ್ನು ಸರಿಪಡಿಸಿ’ ಎಂದು ರೈತರು ಸಂಘಸಂಸ್ಥೆಗಳು ಒತ್ತಾಯಿಸಿದೆ.
ಪಟ್ಟಣದ ಟಿಎಪಿಸಿಎಂಎಸ್ ಬಳಿ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭಿಸಿದ್ದು, ‘ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಇದನ್ನು ಸರಿಪಡಿಸದೇ ಇದ್ದ ಪಕ್ಷದಲ್ಲಿ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಗುಡಿಬಂಡೆ ತಾಲ್ಲೂಕಿನ ನೋಂದಣಿ, ಖರೀದಿ ಪ್ರಕ್ರಿಯೆ ಜವಾಬ್ದಾರಿಯನ್ನು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವಹಿಸಿಕೊಂಡಿದೆ. ಎಫ್ಐಡಿ ಸಂಖ್ಯೆ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್ ರಾಗಿ ಮಾತ್ರ ಖರೀದಿ ಮಾಡಬಹುದು ಎಂದು ಮಿತಿ ಹೇರಲಾಗಿದೆ. ಜತೆಗೆ ಖರೀದಿ ವೇಳೆ ಕನಿಷ್ಠ ಹಾಗೂ ಗರಿಷ್ಠ ಮಿತಿ ಎಂದು ಘೋಷಣೆ ಮಾಡಿದ ನಂತರ ಈ ಸಾಲಿನಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಅಂಶ ಸೇರಿಸಿದ್ದು, ಈ ಮಾಹಿತಿ ಯಾವುದೇ ರೈತರಿಗೆ ತಿಳಿದಿರುವುದಿಲ್ಲ’ ಎಂದು ಆರೋಪಿಸಿದರು.
‘ನೂರಾರು ಕನಸು ಹೊತ್ತು ಅಳಿದುಳಿದ ರಾಗಿ ಫಸಲಿನ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆನಿರೀಕ್ಷೆಯಲ್ಲಿ ಬಂದವರಿಗೆ ನೋಂದಣಿ ಪ್ರಕ್ರಿಯೆ ಫಲಿತಾಂಶ ನೋಡಿ ಆತಂಕಕ್ಕೆ ಒಳಪಟ್ಟಿದ್ದಾರೆ. ಅಧಿಕಾರಿಗಳು ಹಾಗೂ ನೋಂದಣಿ ಸಿಬ್ಬಂದಿ ಸರ್ಕಾರದ ನೀತಿ ನಾವೇನು ಮಾಡಲು ಸಾಧ್ಯವಿಲ್ಲ ಎಂಬ ಕಾರಣ ತಿಳಿಸಿ ಅಸಹಾಯತೆ ತೋರಿದ್ದಾರೆ. ಬೆಳೆಗೆ ಬೆಂಬಲ ಬೆಲೆ ನೀಡುವುದಾಗಿ ಪ್ರಕಟಿಸಿ ಸಣ್ಣ ರೈತರು ಮತ್ತು ದೊಡ್ಡ ರೈತರು ಎಂದು ವಿಭಜಿಸುವುದು ಸರಿಯಲ್ಲ. ಬೆಳೆನಷ್ಟ ಪ್ರತಿಯೊಬ್ಬರೂ ಅನುಭವಿಸಿದ್ದಾರೆ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡರೈತ ವಿ.ಶಿವಣ್ಣ ಹೇಳಿದರು.
‘ಮಿತಿಗೆ ಒಳಪಟ್ಟು ಎಲ್ಲಾ ರೈತರಿಂದ ರಾಗಿ ಖರೀದಿಸುವ ಕಾರ್ಯಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯ’ ಎಂದು ರೈತ ಸಂಘ ಜಿಲ್ಲಾಧ್ಯಕ್ಷ ಎಚ್.ಪಿ.ರಾಮನಾಥರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.