ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಕೋವಿಡ್ ಸಂಕಷ್ಟದಿಂದ ಮೃತಪಟ್ಟಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ನಗರದ ಪ್ರತಿ ಕುಟುಂಬಗಳಿಗೂ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಎಬಿಡಿ ಟ್ರಸ್ಟ್ ಸಂಸ್ಥಾಪಕ ರಾಜೀವ್ ಗೌಡ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಕಷ್ಟು ಮಂದಿ ಕೋವಿಡ್ಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿರುವುದಾಗಿ ಹೇಳಿ ಕೊಂಡಾಗ ಅಂತವರ ನೆರವಿಗೆ ಧಾವಿಸಬೇಕಾಗಿರುವುದು ನಮ್ಮ ಧರ್ಮ. ಅವರಿಗೆ ಸಹಾಯ ಮಾಡಲು ಮುಂದಾಗಿದ್ದೇವೆ ಎಂದರು.
ತಾಲ್ಲೂಕು ಅಭಿವೃದ್ಧಿಯಿಂದ ಸಾಕಷ್ಟು ಹಿಂದುಳಿದಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು, ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕಂಡು ಹಿಡಿಯಬೇಕಾಗಿರುವ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ ವತಿಯಿಂದ ಸಾಮಾಜಿಕ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
ತಾಲ್ಲೂಕಿನಲ್ಲಿ 50 ಸಾವಿರ ಕಿಟ್ಗಳನ್ನು ಮಾಡಿಸಿ ಹಂಚಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ದೇವಾಲಯಗಳ ಜೀರ್ಣೋದ್ಧಾರ, ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ವೈದ್ಯಕೀಯ ಸಮಸ್ಯೆ ಇರುವವರು, ಆಸ್ಪತ್ರೆಗಳಲ್ಲಿ ಬಿಲ್ ಕಟ್ಟಲು ಸಾಧ್ಯವಾಗದವರು, ನಮ್ಮನ್ನು ಸಂಪರ್ಕ ಮಾಡಿದರೆ ಸಹಾಯ ಮಾಡಲಿದ್ದೇವೆ. ಆಂಬುಲೆನ್ಸ್ಗಳನ್ನು ಜನರ ಉಪಯೋಗಕ್ಕೆ ಕೊಡುಗೆಯಾಗಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ತಲಕಾಯಲಬೆಟ್ಟ, ಜಂಗಮಕೋಟೆ ಹಾಗೂ ಸುಗಟೂರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಎಬಿಡಿ ಟ್ರಸ್ಟ್ ಸದಸ್ಯ ಶ್ರೀನಿವಾಸ್ ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.