ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆ ಸುರಿದಿದ್ದು ಈ ಪರಿಣಾಮ ಕೆರೆಗಳಿಗೆ ನೀರಿನ ಹರಿವು ಹೆಚ್ಚಿದೆ. ಶಿಡ್ಲಘಟ್ಟ ತಾಲ್ಲೂಕಿನ ನಾಲ್ಕು ಕೆರೆಗಳಿಗೆ ಹಾನಿಯಾಗಿದೆ. ನಾರಾಯಣಕೆರೆ, ಚಿಕ್ಕಭದ್ರನಘಟ್ಟ ಕೆರೆ, ನಲ್ಲೋಜನಹಳ್ಳಿ ಅಗ್ರಹಾರ ಕೆರೆ, ಗೋಣಿಮರದಹಳ್ಳಿ ಕೆರೆಗಳಿಗೆ ಹಾನಿಯಾಗಿದೆ.
ನಲ್ಲೋಜನಹಳ್ಳಿ ಅಗ್ರಹಾರ ಕೆರೆಯ ಒಂದು ಬದಿ ಒಡೆದ ಕಾರಣ ರಭಸವಾಗಿ ನೀರು ಕೆರೆಯಿಂದ ಹೊರ ಹೋಗುತ್ತಿದೆ. ಕೆರೆ ಸುತ್ತಲಿನ ಜಮೀನುಗಳು ಜಲಾವೃತವಾಗಿವೆ. ಸುತ್ತಲಿನ ಮನೆಗಳವರು ಬೇರೆಡೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಗೋಣಿಮರದಹಳ್ಳಿ ಮತ್ತು ಕೆ.ಹೊಸೂರು ನಡುವಿನ ರಸ್ತೆಯ ಮೋರಿ ಕಿತ್ತು ಹೋಗಿದೆ.
ಗೌರಿಬಿದನೂರು ನಗರದ ಹೊರವಲಯದಲ್ಲಿ ಉತ್ತರ ಪಿನಾಕಿನಿ ಹರಿಯುತ್ತಿದೆ. ನೀರಿನ ರಭಸ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ನದಿ ಅಂಚಿನ 800ಕ್ಕೂ ಹೆಚ್ಚು ಮನೆಗಳಿದ್ದು ನಿವಾಸಿಗಳಿಗೆ ಸಮೀಪದ ಕಲ್ಯಾಣ ಮಂಟಪದಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ.
ಬಾಗೇಪಲ್ಲಿ ತಾಲ್ಲೂಕಿನ ಕಾಣದ ಮಾಕಲಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದ್ದಲಕಾನ ಹಾಗೂ ದೇಶಮಾರ ತಾಂಡಾ ಸಂಪರ್ಕಿಸುವ ರಸ್ತೆಯಲ್ಲಿನ ಮೇಲ್ಸೇತುವೆ ಮುರಿದಿದೆ. ಮಾರ್ಗಾನುಕುಂಟೆ, ಯಲ್ಲಂಪಲ್ಲಿ, ಮಿಟ್ಟೇಮರಿಯಲ್ಲಿಯೂ ರಸ್ತೆಗಳು ಹಾಳಾಗಿವೆ. ಚಿತ್ರಾವತಿ ಜಲಾಶಯ ತುಂಬಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.