ಚಿಂತಾಮಣಿ: ಕಳೆದ 5 ವರ್ಷಗಳಿಂದ ಅರ್ಜಿ ನೀಡಿ ಪ್ರಯತ್ನಿಸುತ್ತಿದ್ದರೂ ತ್ರಿಚಕ್ರವಾಹನ ನೀಡಿಲ್ಲ.ನನಗೆ ನ್ಯಾಯ ಒದಗಿಸಿ ತ್ರಿಚಕ್ರವಾಹನ ನೀಡಬೇಕು ಎಂದು ಒತ್ತಾಯಿಸಿ ಅಂಗವಿಕಲರೊಬ್ಬರು ತಮ್ಮ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ತಾಲ್ಲೂಕಿನ ಚಿಲಕಲನೇರ್ಪು ಹೋಬಳಿ ಬುರುಡಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇಶವಾರಹಳ್ಳಿ ಗ್ರಾಮದ ಅಂಗವಿಕಲ ವಿ.ಮುನಿರಾಜು ಪತ್ನಿ ಮತ್ತು ಇಬ್ಬರು ಮಕ್ಕಳ ಸಮೇತ ಧರಣಿ ಆರಂಭಿಸಿದ್ದಾರೆ.
‘ಕಳೆದ 5 ವರ್ಷಗಳಿಂದಲೂ ತ್ರಿಚಕ್ರವಾಹನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ. ಆದರೂ ಕಡೆಗಣಿಸುತ್ತಿದ್ದಾರೆ. ನಮ್ಮ ಗ್ರಾಮ ಶಿಡ್ಲಘಟ್ಟ ಕ್ಷೇತ್ರದ ವ್ಯಾಪ್ತಿಗೆ ಸೇರುತ್ತದೆ. ಶಾಸಕರೂ ಪತ್ರ ನೀಡಿದ್ದಾರೆ. ಈ ಬಾರಿ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಯಾಗಿತ್ತು. ಮತ್ತೆ ಪಟ್ಟಿ ಪರಿಷ್ಕರಣೆ ಮಾಡಿ ನನ್ನ ಹೆಸರನ್ನು ಕೈಬಿಡಲಾಗಿದೆ’ ಎಂದು ದೂರಿದರು.
‘ನಮ್ಮ ಗ್ರಾಮದಿಂದ 5 ಕಿ.ಮೀ ದೂರ ನಡೆದು ರಸ್ತೆಗೆ ಬರಬೇಕಾಗಿದೆ. ಮಕ್ಕಳು ಶಾಲೆಗೆ ಕಳಿಸುವುದಕ್ಕೂ ತೊಂದರೆಯಾಗಿದೆ. ಆಟೋ ಗೆ ₹150 ನೀಡಿ ಮಕ್ಕನ್ನು ಶಾಲೆಗೆ ಕಳುಹಿಸುತ್ತಿದ್ದೇನೆ. ಈ ವರ್ಷವಾದರೂ ಕೊಡುತ್ತಾರೆ ಎಂಬ ನಂಬಿಕೆ ಇತ್ತು. ಈ ವರ್ಷವೂ ಪಟ್ಟಿಯಿಂದ ನನ್ನ ಹೆಸರನ್ನು ಕೈಬಿಟ್ಟಿರುವುದರಿಂದ ನ್ಯಾಯಕ್ಕಾಗಿ ಧರಣಿ ಕುಳಿತಿದ್ದೇನೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.