ADVERTISEMENT

ಚಿಕ್ಕಬಳ್ಳಾಪುರ: ವಿದುರಾಶ್ವತ್ಥದಲ್ಲಿ ಹರ್ ಘರ್ ತಿರಂಗಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 5:07 IST
Last Updated 13 ಆಗಸ್ಟ್ 2025, 5:07 IST
ಹರ್ ಘರ್ ತಿರಂಗ ಕಾರ್ಯಕ್ರಮ
ಹರ್ ಘರ್ ತಿರಂಗ ಕಾರ್ಯಕ್ರಮ   

ಗೌರಿಬಿದನೂರು: ದೇಶದ ಎಲ್ಲಾ ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲೂ ಬಿಜೆಪಿ ನೇತೃತ್ವದಲ್ಲಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲ್ಲೂಕಿನ ಕಸಬಾ ಹೋಬಳಿಯ ವಿದುರಾಶ್ವತ್ಥದಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ರಾಜ್ಯದ ಎಲ್ಲಾ ಜಿಲ್ಲೆ, ಗ್ರಾಮಗಳಲ್ಲಿ ಯಾತ್ರೆ ಹಮ್ಮಿಕೊಂಡಿದ್ದು ಇದರಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಎಲ್ಲ ಮನೆಗಳ ಮೇಲೆ ತ್ರಿವರ್ಣ ಧ್ವಜ ರಾರಾಜಿಸಬೇಕು. ಭಾರತದಲ್ಲಿ ಭವಿಷ್ಯವಿಲ್ಲ ಎಂದು ದೇಶದ ಜನತೆ ಕಂಗಾಲಾಗಿದ್ದ ಸಂದರ್ಭದಲ್ಲಿ ದೇಶಕ್ಕೆ ಅಭಿವೃದ್ಧಿಯಾಗುವ ಶಕ್ತಿ ಇದೇ ಎಂದು ಮೋದಿ ತೋರಿಸಿದರು ಎಂದರು.

ADVERTISEMENT

ಮೊದಲು ಶಾಲಾ ಕಾಲೇಜು ಮತ್ತು ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಧ್ವಜ ಹಾರಿಸುತ್ತಿದ್ದರು. ಈಗ ಪ್ರತಿಯೊಬ್ಬರ ಮನೆ ಮೇಲೂ ತ್ರಿವರ್ಣ ಧ್ವಜ ರಾರಾಜಿಸಬೇಕು ಎಂದರು.

ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನು ಹೊಂದಿದ ದೇಶಭಕ್ತರಿಗೆ ಹಾಗೂ ಸೈನಿಕರಿಗೆ ಗೌರವ ನೀಡಬೇಕು. ಅವರ ತ್ಯಾಗ ಬಲಿದಾನವನ್ನು ನೆನಪು ಮಾಡಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ಈ ಯಾತ್ರೆ ಮಾಡಲಾಗುತ್ತಿದೆ ಎಂದರು.

ಸ್ವಾತಂತ್ರ ಪೂರ್ವದಲ್ಲಿ 1938 ರಲ್ಲಿ ಬ್ರಿಟಿಷರ ಗುಂಡೇಟಿಗೆ ಬಲಿಯಾದ 33 ಜನ ಹಿರಿಯರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸುವ ಕೆಲಸ ಮಾಡಲಾಗಿದೆ. ನಮ್ಮ ಹಿರಿಯರು ಯಾವುದೇ ಅಪೇಕ್ಷೆ ಇಲ್ಲದೆ ಪ್ರಾಣದ ಹಂಗನ್ನು ತೊರೆದು ಸ್ವಾತಂತ್ರ್ಯ ತಂದುಕೊಟ್ಟರು ಎಂದರು.

ಕಲಂ 370ನ್ನು ತೆಗೆದರೆ ರಕ್ತದೋಕುಳಿ ಹರಿಯುತ್ತದೆ ಎಂದು ಕಾಂಗ್ರೆಸ್ ಲೇವಡಿ ಮಾಡಿತ್ತು. ಒಂದು ಚುಕ್ಕೆ ರಕ್ತ ಹರಿಯದೆ ಜಾರಿಗೆ ತರಲಾಯಿತು. ಪಹಲ್ಗಾಂನಲ್ಲಿ ಉಗ್ರರ ಅಟ್ಟಹಾಸವನ್ನು ಮಟ್ಟಹಾಕಲಾಯಿತು. ಇದು ಆಧುನಿಕ ಭಾರತ. ಯಾವುದೇ ವಿದೇಶಿ ಶಕ್ತಿಗಳು ನಮ್ಮ ಮೇಲೆ ಆಕ್ರಮಣ ಮಾಡಲು ಭಯ ಪಡುವಂತಾಗಿದೆ.

ಬ್ರಿಟಿಷರಿಂದ ಬಳುವಳಿಯಾಗಿ ಬಂದಿರುವ ಪಕ್ಷಗಳು ಜಾತಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುತ್ತಿದೆ. ದೇಶದಲ್ಲಿ ಯಾವುದೇ ಕಷ್ಟಕರ ಸಂದರ್ಭದಲ್ಲಿ ಪಕ್ಷವನ್ನು ಮರೆತು ದೇಶ ಮೊದಲು ಎಂದು ಕಾರ್ಯಪ್ರವೃತ್ತರಾಗುತ್ತೇವೆ ಎಂದು ಹೇಳಿದರು.

ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಬಡವರಾಗಲಿ, ಶ್ರೀಮಂತರಾಗಲಿ ಎಲ್ಲರಿಗೂ ರಾಷ್ಟ್ರ ಒಂದ. ಎಲ್ಲರಲ್ಲೂ ದೇಶಭಕ್ತಿ ಇರಬೇಕು. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು ಸ್ಮರಿಸಬೇಕು. ದೇಶದ ಬಗ್ಗೆ ಯಾವುದೇ ಪಕ್ಷದವರು ಕರೆಕೊಟ್ಟರು ನಾವು ಹೋಗಬೇಕು. ನಮ್ಮ ತಾಯಿ ಮತ್ತು ದೇಶ ಹಾಗೂ ಸಂಸ್ಕೃತಿಯನ್ನು ಮರೆತರೆ ದೇಶವು ನಾಶದ ಕಡೆ ಹೋಗುತ್ತದೆ ಎಂದರು.

ನಮ್ಮ ದೇಶ ಶಾಂತಿಪ್ರಿಯ ದೇಶವಾಗಿದೆ. ಯಾವುದೇ ಪಕ್ಷ, ಜಾತಿ, ಧರ್ಮ ನೋಡದೆ ದೇಶ ಎಂದು ಬಂದಾಗ ಎಲ್ಲರೂ ಒಂದಾಗಬೇಕು. ಹತ್ತು ವರ್ಷ ಬದುಕುವ ಬದಲು ಮೂರು ವರ್ಷ ಸಿಂಹಗಳಾಗಿ ಬದುಕಿದರೆ ಸಾಕು ಎಂದರು.

ನಗರದ ಕೆಂಪೇಗೌಡ ವೃತ್ತದಲ್ಲಿ ಬಿ.ವೈ.ವಿಜಯೇಂದ್ರ ಮತ್ತು ಗಣ್ಯರಿಗೆ ಬಿಜೆಪಿ ಮುಖಂಡರು ಸ್ವಾಗತಕೋರಿದರು. ಕಾರ್ಯಕರ್ತರು ಮತ್ತು ಮುಖಂಡರು ಬೈಕ್ ಮತ್ತು ಕಾರು ರ‍್ಯಾಲಿ ಮೂಲಕ ವಿದುರಾಶ್ವತ್ಥ ತಲುಪಿದರು. ವೀರಸೌಧದಲ್ಲಿರುವ ಸ್ವಾತಂತ್ರ್ಯ ಯೋಧರ ಹುತಾತ್ಮರ ಸ್ಥೂಪಕ್ಕೆ ಪುಷ್ಪ ನಮನ ಸಲ್ಲಿಸಿದರು.

ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಮಾಜಿ ಶಾಸಕ ರಾಜಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ತಮ್ಮೇಶ್ ಗೌಡ, ಸಿ.ಮುನಿರಾಜು, ಸೀಕಲ್ ರಾಮಚಂದ್ರ, ಎನ್.ಎಂ.ರವಿನಾರಾಯಣರೆಡ್ಡಿ, ರಾಮಲಿಂಗಪ್ಪ, ಜಿ.ವಿ.ಮಂಜುನಾಥ, ವೇಣುಗೋಪಾಲ್, ಎಚ್.ಎಸ್.ಶಶಿಧರ್, ರಾಮಕೃಷ್ಣಪ್ಪ, ನಿರ್ಮಲಮ್ಮ, ಮಾರ್ಕೆಟ್ ಮೋಹನ್, ಕೋಡಿರ್ಲಪ್ಪ, ನಾಗಭೂಷಣ್ ರಾವ್, ಬಿ.ಎನ್.ರಂಗನಾಥ್, ರಮೇಶ್ ರಾವ್ ಶೆಲ್ಕೆ, ಮುರಳಿಧರ್, ಭರತರೆಡ್ಡಿ, ವೇಣು, ಮುನಿಲಕ್ಷ್ಮಮ್ಮ, ಚೈತ್ರಾ ಹಾಜರಿದ್ದರು.

ಗೌರಿಬಿದನೂರಿನಲ್ಲಿ ಹರ್‌ಘರ್ ತಿರಂಗ ಕಾರ್ಯಕ್ರಮ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.