ಬಾಗೇಪಲ್ಲಿ: ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಸುರಿದ ಭಾರಿ ಮಳೆಯಿಂದ, ಜನ ಜೀವನ ಅಸ್ತವ್ಯಸ್ತಗೊಂಡು, ಡಾ.ಎಚ್.ಎನ್.ವೃತ್ತ, ವಾಲ್ಮೀಕಿ ನಗರ ಸೇರಿದಂತೆ ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದ್ದವು.
ಪಟ್ಟಣದ ಮುಖ್ಯರಸ್ತೆ ಸೇರಿದಂತೆ ವಿವಿಧ ಬೀದಿಗಳ ರಸ್ತೆಗಳಲ್ಲಿ ಮಳೆಯ ನೀರು ರಭಸವಾಗಿ ಹರಿಯಿತು. ಸರ್ಕಾರಿ ಜೂನಿಯರ್ ಕಾಲೇಜಿನ ಆಟದ ಮೈದಾನದಲ್ಲಿ ಬಿದ್ದ ಮಳೆಯ ನೀರು ಚರಂಡಿ ಮೂಲಕ ರಭಸವಾಗಿ ಮುಖ್ಯರಸ್ತೆಯಲ್ಲಿ ಕಾಲುವೆಯಾಗಿ ಹರಿಯಿತು. ಸಮರ್ಪಕವಾಗಿ ಮಳೆ, ಚರಂಡಿ ನೀರು ಹರಿಸುವಂತೆ ಮಾಡದಿರುವುದರಿಂದ ಮಂಗಳವಾರವು ಸಹ ಕೆರೆ ಮಾದರಿಯಾಗಿತ್ತು.
ಡಾ.ಎಚ್.ಎನ್.ವೃತ್ತದ ಮೂಲಕ ಗೂಳೂರು, ಪಟ್ಟಣದ ಕಡೆಯಿಂದ ಬರುವ ದ್ವಿಚಕ್ರ, ಕಾರು, ಆಟೊ ಚಾಲಕರು ಜಲಾವೃತಗೊಂಡ ನೀರಿನಲ್ಲಿ ಭಯಭೀತರಾಗಿ ಸಂಚರಿಸಿದರು. ತಾಲ್ಲೂಕು ಮಿನಿಕ್ರೀಡಾಂಗಣ, ವಾಲ್ಮೀಕಿ ನಗರದ 1, 2 ಹಾಗೂ 3 ನೇ ಕೆಲ ವಾರ್ಡ್ಗಳಲ್ಲಿನ ರಸ್ತೆಗಳ ಮೇಲೆ ಮಳೆ, ಚರಂಡಿ ನೀರು ಹರಿಯಿತು. ಮಳೆ, ಚರಂಡಿ ನೀರು ಮನೆಗಳಿಗೆ ನುಗ್ಗಿದೆ.
‘ಅವೈಜ್ಞಾನಿಕವಾಗಿ ರಸ್ತೆ, ಚರಂಡಿಗಳನ್ನು ನಿರ್ಮಿಸಿರುವುದರಿಂದ ಸಮರ್ಪಕವಾಗಿ ನೀರು ಹರಿಯದೇ, ತಗ್ಗಿನ ಪ್ರದೇಶಗಳು, ರಸ್ತೆಗಳು ಜಲಾವೃತವಾಗುತ್ತವೆ’ ಎಂದು ವಾಲ್ಮೀಕಿ ನಗರದ ಅಶ್ವತ್ಥಪ್ಪ ಹೇಳಿದರು.
‘ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಪ್ರತಿ ಬಾರಿ ಮಳೆ ಬಂದರೆ ಕೆರೆ ಮಾದರಿ ನೀರು ಶೇಖರಣೆ ಆಗುತ್ತದೆ. ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದ್ದರೂ, ಸಂಬಂಧ ಪಟ್ಟ ಇಲ್ಲಿನ ಪುರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಗಮನ ಹರಿಸಿಲ್ಲ. ಅವೈಜ್ಞಾನಿಕದಿಂದ ನಿರ್ಮಿಸಿರುವ ರಸ್ತೆ, ಚರಂಡಿಗಳನ್ನು ಕೂಡಲೇ ದುರಸ್ತಿಪಡಿಸಬೇಕು’ ಎಂದು ವಾಲ್ಮೀಕಿ ನಗರದ ಆರ್. ಪ್ರತಾಪ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.