ಚಿಂತಾಮಣಿ: ಇಲ್ಲಿನ ಭಕ್ತಿನಗರ ಬಡಾವಣೆಯಲ್ಲಿ ಭೋಗ್ಯಕ್ಕೆ ನೀಡಿದ್ದ ಮನೆ ತೆರವುಗೊಳಿಸುವ ಸಂಬಂಧ ಎರಡು ಕುಟುಂಬಗಳ ನಡುವೆ ನಡೆದ ಗಲಾಟೆಯಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಶಂಕರಾಚಾರಿ ಮೃತಪಟ್ಟವರು.
ನಾರಾಯಣಸ್ವಾಮಿ, ಅರುಣಾ ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಈ ಇಬ್ಬರನ್ನೂ ಬಂಧಿಸಲಾಗಿದೆ. ಈ ಬಗ್ಗೆ ಶಂಕರಾಚಾರಿ ಅವರ ಪತ್ನಿ ಕೆ.ಆರ್. ನಿರ್ಮಲಾ ಪೊಲೀಸರಿಗೆ ದೂರು ನೀಡಿದ್ದು, ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ನಾರಾಯಣಸ್ವಾಮಿ ಎಂಬುವರಿಗೆ ಮೂರು ವರ್ಷಗಳ ಹಿಂದೆ ಮನೆಯನ್ನು ಭೋಗ್ಯಕ್ಕೆ ನೀಡಲಾಗಿತ್ತು. ಇತ್ತೀಚೆಗೆ ನಮಗೆ ಮನೆಯ ಅವಶ್ಯಕತೆ ಇದ್ದುದರಿಂದ ಖಾಲಿ ಮಾಡುವಂತೆ ಒತ್ತಾಯಿಸಿದ್ದೆವು. ಈ ಬಗ್ಗೆ ಶಂಕರಾಚಾರಿ ಮತ್ತು ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅ. 1ರಂದು ನಾರಾಯಣಸ್ವಾಮಿ, ಅವರ ಪತ್ನಿ ಅರುಣಾ ಹಾಗೂ ಮಕ್ಕಳು ಮನೆಯ ಬಳಿ ಬಂದು ಶೆಡ್ ಬೀಗದ ಕೀ ಕೊಡಿ ಎಂದು ಉದ್ದೇಶಪೂರ್ವಕವಾಗಿ ಜಗಳ ತೆಗೆದರು. ಶಂಕರಾಚಾರಿ ಮೇಲೆ ಹಲ್ಲೆ ನಡೆಸಿ ನೆಲಕ್ಕೆ ತಳ್ಳಿದರು. ತಲೆಗೆ ಪೆಟ್ಟಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಶನಿವಾರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಎಂ.ವಿ.ಜೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.