ADVERTISEMENT

ಚರ್ಚೆಗೆ ಬರುವುದು ಬಿಟ್ಟು ಅಪಪ್ರಚಾರ: ಸಂಸದೆ ಶೋಭಾ ಕರಂದ್ಲಾಜೆ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತ ಜನ ಜಾಗರಣ ಅಭಿಯಾನ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 10:31 IST
Last Updated 10 ಜನವರಿ 2020, 10:31 IST
ನಗರದಲ್ಲಿ ನಡೆದ ಸಿಎಎ ಕುರಿತ ಜನ ಜಾಗರಣ ಅಭಿಯಾನದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿದರು.
ನಗರದಲ್ಲಿ ನಡೆದ ಸಿಎಎ ಕುರಿತ ಜನ ಜಾಗರಣ ಅಭಿಯಾನದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿದರು.   

ಚಿಕ್ಕಬಳ್ಳಾಪುರ: ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿಚಾರದಲ್ಲಿ ಮುಸ್ಲಿಮರನ್ನು ಎತ್ತಿಕಟ್ಟಿ, ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್‌ ನಾಯಕರು ಬಹಿರಂಗ ವೇದಿಕೆಗೆ ಚರ್ಚೆಗೆ ಬಂದು, ಸಿಎಎಯಿಂದ ಭಾರತದಲ್ಲಿ ಹುಟ್ಟಿದ ಮುಸ್ಲಿಮರಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬುದರ ಕುರಿತು ಚರ್ಚೆ ಮಾಡಲಿ. ಆದರೆ ವಿರೋಧ ಪಕ್ಷದವರು ಚರ್ಚೆಗೂ ಬರದೆ, ಅದಕ್ಕೆ ಅವಕಾಶವನ್ನೂ ಕೊಡದೆ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸಿಎಎ ಕುರಿತ ಜನ ಜಾಗರಣ ಅಭಿಯಾನ ಮತ್ತು ಮನೆ ಮನೆ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಪ್ರಚಾರ ಮಾಡುವವರು ಬಹಿರಂಗ ಚರ್ಚೆಗೆ ಬಂದು ಸತ್ಯ ತಿಳಿದುಕೊಳ್ಳಲಿ. ಬಳಿಕ ಪರ–ವಿರೋಧದ ಮಾತನಾಡಲಿ. ದೇಶದಲ್ಲಿ ಎಲ್ಲ ಸಮುದಾಯದವರು ಒಟ್ಟಾಗಿ ಬದುಕುತ್ತಿದ್ದಾರೆ. ಭಾರತದಲ್ಲಿ ಹುಟ್ಟಿದ ಯಾವುದೇ ಮುಸ್ಲಿಮರಿಗೆ ಸಿಎಎ ಅನ್ವಯಿಸುವುದಿಲ್ಲ. ಯಾರು ಕೂಡ ಕಾಂಗ್ರೆಸ್‌ನ ಕೆಟ್ಟ ರಾಜನೀತಿಗೆ ಬಲಿಯಾಗಬಾರದು’ ಎಂದು ಹೇಳಿದರು.

‘ಕಾಂಗ್ರೆಸ್ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತ, ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಜನ ಸಂಘರ್ಷ ಉಂಟು ಮಾಡಿ, ಆ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡುವ ಕೆಲಸ ಮಾಡುತ್ತಿವೆ. ಇಂತಹ ಅಪಪ್ರಚಾರದಿಂದ ತಮ್ಮ ಮತ ಬ್ಯಾಂಕ್‌ ಮತ್ತಷ್ಟು ಗಟ್ಟಿಗೊಳಿಸಬಹುದು ಎಂದು ಭಾವಿಸಿಕೊಂಡಿರುವ ಕಾಂಗ್ರೆಸ್‌ನವರು, ದೇಶದಲ್ಲಿ ಎರಡು ಸಮುದಾಯದವರನ್ನು ಸಂಘರ್ಷಕ್ಕೆ ಈಡುಮಾಡುವ ಪಾಪದ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ವೈಚಾರಿಕ ಸಂಘರ್ಷಕ್ಕೆ ಸ್ವಾಗತವಿದೆ. ಆದರೆ ದೇಶದಲ್ಲಿ ಇವತ್ತು ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ದೇಶದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದ್ದೆ. ಅದಕ್ಕೆ ಜೆಎನ್‌ಯು, ಮೈಸೂರು ಘಟನೆಗಳೇ ಉದಾಹರಣೆ. ಇದರ ಹಿಂದಿರುವ ಶಕ್ತಿಗಳನ್ನು ಪತ್ತೆ ಮಾಡಬೇಕು. ಜೆಎನ್‌ಯು ಮತ್ತು ರಾಜ್ಯದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ನಿಲಯಗಳಲ್ಲಿ ಅವಧಿಗೂ ಮೀರಿ ಬೀಡು ಬಿಟ್ಟು ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುವ ದೇಶದ್ರೋಹಿ ಶಕ್ತಿಗಳನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.