ADVERTISEMENT

ಕೈವಾರದಲ್ಲಿ ಭಕ್ತರ ಕಲರವ

ದೇವಾಲಯಗಳ ನಗರಿ ನಿಧಾನವಾಗಿ ಸಹಜ ಸ್ಥಿತಿಗೆ

ಎಂ.ರಾಮಕೃಷ್ಣಪ್ಪ
Published 18 ಸೆಪ್ಟೆಂಬರ್ 2020, 6:57 IST
Last Updated 18 ಸೆಪ್ಟೆಂಬರ್ 2020, 6:57 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಕ್ತರು ದರ್ಶನ ಪಡೆಯುತ್ತಿರುವುದು
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಮಠದಲ್ಲಿ ಭಕ್ತರು ದರ್ಶನ ಪಡೆಯುತ್ತಿರುವುದು   

ಚಿಂತಾಮಣಿ: ಲಾಕ್‌ಡೌನ್ ಕಾರಣ 5 ತಿಂಗಳಿಂದ ಮುಚ್ಚಿದ್ದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಲು ಆರಂಭಿಸಿದ್ದಾರೆ.

ತಾಲ್ಲೂಕಿನ ಕೈವಾರ ಕ್ಷೇತ್ರದಲ್ಲಿ ಭಕ್ತರ ಕಲರವ ಇರುತ್ತಿತ್ತು. ಲಾಕ್‌ಡೌನ್‌ನಿಂದ ಕಳಾಹೀನವಾಗಿದ್ದ ದೇವಾಲಯಗಳ ನಗರಿ ನಿಧಾನವಾಗಿ ಸಹಜ ಸ್ಥಿತಿಗೆ ತಲುಪುತ್ತಿದೆ. ಗ್ರಾಮದ ಯೋಗಿನಾರೇಯಣ ಮಠ, ಅಮರ ನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇವಾಲಯ, ಯೋಗಿನಾರೇಯಣ ಗುಹೆಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ.

ಕೋವಿಡ್- 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಎಲ್ಲ ಕೈಂಕರ್ಯಗಳು ಮೊದಲಿನಂತೆ ನಡೆಯುತ್ತಿವೆ. ಎಲ್ಲ ದೇವಾಲಯಗಳಲ್ಲಿ ಭಕ್ತರ ಕಲರವ ಹೆಚ್ಚುತ್ತಿದೆ.

ADVERTISEMENT

ದೇವಾಲಯಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜರ್ ಮಾಡಲಾಗುತ್ತಿದೆ. ಮುಖಗವಸು ಧರಿಸಿರುವ ಭಕ್ತರು ದರ್ಶನಕ್ಕೆ ಸರತಿ ಸಾಲಿನಲ್ಲಿ ಬರುವ ವ್ಯವಸ್ಥೆ ಮಾಡಲಾಗಿದೆ.

ಯೋಗಿನಾರೇಯಣ ಮಠದಲ್ಲಿ ಎಲ್ಲ ಸೇವಾ ಕೈಂಕರ್ಯಗಳು ಹಿಂದಿನಂತೆ ನಡೆಯುತ್ತಿವೆ. ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ವ್ಯವಸ್ಥೆ ಇದೆ. ಭಕ್ತರ ವಿಶ್ರಾಂತಿಗೆ ಕೊಠಡಿ ವ್ಯವಸ್ಥೆ ಇದೆ. ಭಕ್ತರು ಭಜನೆ, ಜಪ ಮಾಡಲು ಅವಕಾಶ ನೀಡಲಾಗಿದೆ.

ಅಮರನಾರೇಯಣ ಸ್ವಾಮಿ ದೇವಾಲಯ, ಭೀಮಲಿಂಗೇಶ್ವರಸ್ವಾಮಿ ದೇಗುಲಕ್ಕೂ ಭಕ್ತರು ಬರುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ದಟ್ಟಣೆ ಕಡಿಮೆ ಇರುತ್ತದೆ. ವಾರಾಂತ್ಯದಲ್ಲಿ(ಶನಿವಾರ, ಭಾನುವಾರ) ಭಕ್ತರ ಭೇಟಿ
ಹೆಚ್ಚಿರುತ್ತದೆ.

ಮುಖಗವಸು ಧರಿಸಿರಬೇಕು. ಗುಂಪಾಗಿ ಹೋಗಬಾರದು, ಕೈ ಕುಲಕಬಾರದು. ಅಂತರ ಕಾಪಾಡಿಕೊಳ್ಳಬೇಕು. ವಯಸ್ಸಾದ ಹಿರಿಯರು ಮತ್ತು ಮಕ್ಕಳಿಗೆ ಪ್ರವೇಶವಿಲ್ಲ ಎನ್ನುವ ಸೂಚನಾ ಫಲಕ ದೇಗುಲಗಳ ದ್ವಾರದ ಬಳಿ ಅಂಟಿಸಲಾಗಿದೆ.

ದೇಗುಲ ತೆರೆಯಲಾಗಿದ್ದರೂ ಬೆರಳೆಣಿಕೆಯಷ್ಟು ಮಂದಿ ಬರುತ್ತಿದ್ದಾರೆ. ಜನರಿಗೆ ಸೋಂಕಿನ ಭಯ, ಅಂಜಿಕೆ ಕಡಿಮೆಯಾಗಿಲ್ಲ. ದೇವರು, ಧಾರ್ಮಿಕ ಆಚರಣೆಗಿಂತ ಆರೋಗ್ಯ ಮುಖ್ಯ. ಸೋಂಕಿನ ಸಂಖ್ಯೆ ಕಡಿಮೆಯಾದರೆ ಜನರು ದೇವಸ್ಥಾನಕ್ಕೆ ಬರುತ್ತಾರೆ ಎಂದು ಹಿರಿಯ ಪ್ರವಚನಕಾರ ತಳಗವಾರ ಆನಂದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.