ಬಾಗೇಪಲ್ಲಿ: ಗ್ರಾಮ ಪಂಚಾಯಿತಿ ಸಿಬ್ಬಂದಿಯ ಬಾಕಿ ಉಳಿದಿರುವ ವೇತನ, ಪಿಂಚಣಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಮಿತಿ (ಸಿಐಟಿಯು ಸಂಯೋಜಿತ) ತಾಲ್ಲೂಕು ಮುಖಂಡರು ತಾಲ್ಲೂಕು ಪಂಚಾಯಿತಿ ಅಧಿಕಾರಿ ಪದ್ಮಾವತಮ್ಮ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ನೌಕರರ ತಾಲ್ಲೂಕು ಸಮಿತಿ ಅಧ್ಯಕ್ಷ ಜಿ.ಎಸ್.ಶ್ರೀನಿವಾಸ್ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ವಿತರಿಸಬೇಕು ಎಂದು ಆದೇಶ ಬಂದರೂ ಅಧಿಕಾರಿಗಳು ಆದೇಶಗಳನ್ನು ಉಲ್ಲಂಘನೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಸರ್ಕಾರದಿಂದ ಬರಬೇಕಾದ ₹382 ಕೋಟಿ ಇದುವರೆಗೂ ಬಿಡುಗಡೆ ಆಗಿಲ್ಲ ಎಂದು ಆರೋಪಿಸಿದರು.
ಸಿಬ್ಬಂದಿಗೆ ಮಾಸಿಕ ಪಿಂಚಣಿ ₹10 ಸಾವಿರಕ್ಕೆ ಭವಿಷ್ಯನಿಧಿ,ಆರೋಗ್ಯ ವಿಮೆ ಒದಗಿಸಬೇಕು. 15ನೇ ಹಣಕಾಸಿನ ಅನುದಾನದ ಯೋಜನೆಯಡಿ ಸಿಬ್ಬಂದಿ ವೇತನಕ್ಕಾಗಿ ಹಣ ಮೀಸಲಿಡಬೇಕು. 12-16 ತಿಂಗಳಿಂದ ಬಾಕಿ ಉಳಿದಿರುವ ವೇತನಗಳನ್ನು ಕೂಡಲೇ ಪಾವತಿ ಮಾಡಬೇಕು ಎಂದು
ಒತ್ತಾಯಿಸಿದರು.
ಕನಿಷ್ಠ ವೇತನ ಜಾರಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ನೌಕರರ ಖಾತೆ ಆರಂಭಿಸಬೇಕು. ಅಕ್ರಮ ನೇಮಕಾತಿ ತಡೆದು ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರಿಗೆ ಜಲಗಾರರಿಗೆ ಹಾಗೂ ಅರ್ಹ ಸಿಬ್ಬಂದಿಗೆ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ನೀಡಬೇಕು. ಸೇವಾ ಪುಸ್ತಕ ತೆರೆಯಬೇಕು ಎಂದು
ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯದರ್ಶಿ ಎಂ.ಈಶ್ವರಪ್ಪ, ಉಪಾಧ್ಯಕ್ಷ ಸತ್ಯನಾರಾಯಣಪ್ಪ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.