ಬಾಗೇಪಲ್ಲಿ: ಜೆಡಿಎಸ್ ಶಾಸಕಾಂಗದ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶುಕ್ರವಾರ ಪಟ್ಟಣಕ್ಕೆ ಪಂಚರತ್ನ ರಥಯಾತ್ರೆ ಆಗಮಿಸಿವ ವೇಳೆ ಕ್ಷೇತ್ರದ ಜೆಡಿಎಸ್ ಮುಖಂಡರಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಜೆಡಿಎಸ್ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಮತ್ತು ಅಧ್ಯಕ್ಷರಿಗೆ ರಥಯಾತ್ರೆಯ ಪೂರ್ವಭಾವಿ ಸಭೆಗಳಿಗೆ ಆಹ್ವಾನ ಇರಲಿಲ್ಲ. ಇದರಿಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹ ನಾಯ್ಡು, ತಾಲ್ಲೂಕು ಗೌರವ ಅಧ್ಯಕ್ಷ ಮಹಮದ್ ಎಸ್.ನೂರುಲ್ಲಾ, ಅಧ್ಯಕ್ಷ ಸೂರ್ಯನಾರಾಯಣ ರೆಡ್ಡಿ ಬಣ ಚಿತ್ರಾವತಿ ಹೋರಾಟ ವೃತ್ತದಲ್ಲಿಕುಮಾರಸ್ವಾಮಿ ಅವರನ್ನು ಸ್ವಾಗತಿಸಿ ಪ್ರತ್ಯೇಕ ಸಭೆ ಮಾಡಿದರು.ಡಿ.ಜೆ.ನಾಗರಾಜ ರೆಡ್ಡಿ ಬಣದವರು ಡಾ.ಎಚ್.ಎನ್.ವೃತ್ತದಲ್ಲಿ ಯಾತ್ರೆಯನ್ನು ಸ್ವಾಗತಿಸಿದರು.
‘ಡಿ.ಜೆ.ನಾಗರಾಜ ರೆಡ್ಡಿ ನಮ್ಮನ್ನು ಕಡೆಗಣಿಸಿ ಸಭೆ, ಸಮಾರಂಭ ನಡೆಸಿದ್ದಾರೆ. ಪಂಚರತ್ನ ರಥ ಯಾತ್ರೆಯಲ್ಲೂ ಜವಾಬ್ದಾರಿ ನೀಡಿಲ್ಲ’ ಎಂದು ತಾಲ್ಲೂಕು ಜೆಡಿಎಸ್ ಗೌರವ ಅಧ್ಯಕ್ಷ ಮಹಮದ್ ಎಸ್. ನೂರುಲ್ಲಾ ಅಸಮಾಧಾನ ಹೊರ ಹಾಕಿದ್ದಾರೆ. ಈ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
‘ಜೆಡಿಎಸ್ ಒಂದು ಕುಟುಂಬ ಇದ್ದಂತೆ. ಮನೆಗೆ ಬಂದವರು ಎಲ್ಲರೂ ಒಗ್ಗಟ್ಟಾಗಿರಬೇಕು. ಪಕ್ಷ ಸಂಘಟಿಸಬೇಕು. ಪಕ್ಷ ಸಂಘಟನೆ ಮಾಡಿದರೆ ಯಾರೂ ಬೇಡ ಎನ್ನಲ್ಲ. ಎಲ್ಲ ಸ್ಥಳೀಯ ನಾಯಕರನ್ನು ವಿಶ್ವಾಸ ಪಡೆದುಕೆಲಸ ಮಾಡುತ್ತೇನೆ’ ಎಂದು ಡಿ.ಜೆ.ನಾಗರಾಜರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.