ADVERTISEMENT

ಶಿಡ್ಲಘಟ್ಟ: ರಸ್ತೆಗಳಿಗೆ ಸಿಗಬಹುದೇ ತುರ್ತು ‘ಶಸ್ತ್ರ ಚಿಕಿತ್ಸೆ’

ರೇಷ್ಮೆ, ಹೈನು, ಆಸ್ಪತ್ರೆ ಅಭಿವೃದ್ಧಿ ಕನಸು । ಬಜೆಟ್– ಶಿಡ್ಲಘಟ್ಟ ಜನತೆ ನಿರೀಕ್ಷೆ ಅಪಾರ

ಡಿ.ಜಿ.ಮಲ್ಲಿಕಾರ್ಜುನ
Published 24 ಫೆಬ್ರುವರಿ 2025, 7:11 IST
Last Updated 24 ಫೆಬ್ರುವರಿ 2025, 7:11 IST
ಶಿಡ್ಲಘಟ್ಟದ ತಾಲ್ಲೂಕು ಕಚೇರಿ
ಶಿಡ್ಲಘಟ್ಟದ ತಾಲ್ಲೂಕು ಕಚೇರಿ   

ಶಿಡ್ಲಘಟ್ಟ: ಶಿಡ್ಲಘಟ್ಟ ರೇಷ್ಮೆ ಮತ್ತು ಹಾಲು ಉತ್ಪಾದನೆಗೆ ಪ್ರಸಿದ್ಧಿ ಪಡೆದಿವೆ. ಈ ಎರಡೂ ಕ್ಷೇತ್ರಕ್ಕೆ ಉತ್ತೇಜನ ಸಿಗುವ ಯೋಜನೆ ಈ ಬಾರಿಯ ಬಜೆಟ್‌ನಲ್ಲದರೂ ರೂಪುಗೊಳ್ಳಬಹುದೆಂದು ತಾಲ್ಲೂಕಿನ ಜನತೆ ದೃಷ್ಟಿ ರಾಜ್ಯ ಬಜೆಟ್‌ನತ್ತ ನೆಟ್ಟಿದೆ. ಇದಕ್ಕಿಂತ ಬಹುಮುಖ್ಯವಾಗಿ ತಾಲ್ಲೂಕಿನ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ತುರ್ತಾಗಿ ಬಲ ಪಡಿಸಬೇಕಿದೆ.

ತಾಲ್ಲೂಕಿನಲ್ಲಿ ಸುಮಾರು 200–220 ಹಳ್ಳಿಗಳಿವೆ. ತಾಲ್ಲೂಕು ಕೇಂದ್ರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಹದಗೆಟ್ಟಿದೆ. ಕೆಲವು ಗ್ರಾಮಗಳ ರಸ್ತೆಗಳು ರಸ್ತೆ ಎನ್ನಿಸಿಕೊಳ್ಳುವ ಯೋಗ್ಯತೆ ಕಳೆದುಕೊಂಡಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸಂಚಾರ ಸಂಕಷ್ಟವಾಗಿದೆ. ಹಲವು ವರ್ಷಗಳಿಂದ ಸುಸಜ್ಜಿತ ರಸ್ತೆ ಗ್ರಾಮೀಣರಿಗೆ ಕನಸಾಗಿ ಪರಿಣಮಿಸಿದೆ.

ತಾಲ್ಲೂಕಿನ 250 ಕಿ.ಮೀ ರಸ್ತೆ ಹದಗೆಟ್ಟಿದ್ದು, 100 ಕಿ.ಮೀ ರಸ್ತೆ ಸಂಚರಿಸುವ ಯೋಗ್ಯತೆ ಕಳೆದುಕೊಂಡಿದೆ. 150 ಕಿ.ಮೀ ರಸ್ತೆಯನ್ನು ಅಗತ್ಯವಾಗಿ ಹೊಸದಾಗಿ ನಿರ್ಮಾಣವಾಗಬೇಕಿದೆ. ಅದರಲ್ಲಿ 100 ಕಿ.ಮೀ ರಸ್ತೆ ಅತಿ ತುರ್ತಾಗಿ ನಿರ್ಮಾಣವಾಗಬೇಕಿದೆ.

ADVERTISEMENT

ರೇಷ್ಮೆಗೆ ಸಂಬಂಧಿಸಿದಂತೆ ಹೈಟೆಕ್ ಮಾರುಕಟ್ಟೆಗೆ ಅನುದಾನದ ಬಿಡುಗಡೆ, ಹೈನುಗಾರಿಕೆಗೆ ನೀರಾವರಿ ಯೋಜನೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ಕ್ರೀಡೆಗೆ ಸಂಬಂಧಿಸಿದಂತೆ ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ತಾಲ್ಲೂಕಿನ 250 ಕಿ.ಮೀ ಹಳ್ಳಿ ರಸ್ತೆಗಳ ಅಭಿವೃದ್ಧಿ ತುರ್ತಾಗಿ ಆಗಬೇಕಿದೆ. ಇವುಗಳೊಂದಿಗೆ ಗ್ರಂಥಾಲಯ, ಅಂಬೇಡ್ಕರ್ ಭವನ, ಕೆರೆ ಸಂರಕ್ಷಣೆ ಸೇರಿದಂತೆ ಸಾಕಷ್ಟು ನಿರೀಕ್ಷೆಗಳು ಜನರಲ್ಲಿ ಇವೆ.

ಕಳೆದ ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ ಬಿ.ಎನ್.ರವಿಕುಮಾರ್ ವಿವಿಧ ಸಚಿವರಿಗೆ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಮಾಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಆ ಭರವಸೆಗಳು ಈ ಬಜೆಟ್‌ನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುವುದೇ ಎಂಬ ಕಾತರ ಎಲ್ಲರ ಕಣ್ಣುಗಳಲ್ಲಿದೆ.

ತಾಲ್ಲೂಕಿನ ರಾಮಸಮುದ್ರ ಕೆರೆಯಿಂದ ನಗರ ಪ್ರದೇಶದ ಪ್ರತಿ ಮನೆಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನವಾಗಬೇಕೆಂಬುದು ನಗರ ವ್ಯಾಪ್ತಿಯ ಜನರ ಬಹು ನಿರೀಕ್ಷಿತ ಕನಸಾಗಿದೆ. ಈ ಬಜೆಟ್ ಈ ಕನಸನ್ನು ಸಾಕಾರಗೊಳಿಸುವುದೇ ಎಂದು ಜನರು ಕಾತರರಾಗಿರುವರು.

ಈ ಎಲ್ಲ ಬೇಡಿಕೆಗಳು ಒಂದೆರಡು ವರ್ಷದಲ್ಲ. 30–40 ವರ್ಷಗಳಿಂದ ಸ್ಥಳೀಯರು ಈ ಬೇಡಿಕೆ ಈಡೇರಿಕೆಗಾಗಿ ಮನವಿ ಮಾಡುತ್ತಾಲೇ ಬರುತ್ತಿದ್ದಾರೆ. ಯಾವ ಬಜೆಟ್‌ನಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಈಡೇರಿವುದೇ ಎಂದು ಕಾದು ನೋಡಬಹುದಾಗಿದೆ.

ಶಿಡ್ಲಘಟ್ಟದ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರ
ಈ ಬಜೆಟ್‌ನಲ್ಲಿ ಕ್ಷೇತ್ರಕ್ಕೆ ಹಲವು ಪ್ರಯೋಜನೆ ‘
ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಜನರು ದೈನಂದಿನ ಕೆಲಸಗಳಿಗೆ ತೊಂದರೆಯಾಗುತ್ತಿರುವ ವಿಚಾರವನ್ನು ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು 2024-25 ಸಾಲಿನಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅನುದಾನ ಮಂಜೂರು ಮಾಡಿ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಪಡಿಸಲು ಕ್ರಮವಹಿಸಲಾಗುತ್ತಿದೆ ಎಂದು ಲಿಖಿತ ಉತ್ತರ ಕೊಟ್ಟಿದ್ದಾರೆ. ಹಾಗಾಗಿ ಈ ಬಾರಿಯ ಬಜೆಟ್ ಶಿಡ್ಲಘಟ್ಟ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ಅಂಗನವಾಡಿ ಕೊರತೆ ನೀಗಿಸಬೇಕು ಎಂಬ ವಿಚಾರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು 2024-25 ನೇ ಸಾಲಿಗೆ ಹೊಸದಾಗಿ ಅಂಗನವಾಡಿ ಕೇಂದ್ರ ತೆರೆಯಲು ಅಗತ್ಯಕ್ಕೆ ತಕ್ಕಂತೆ ಹೊಸ ಅಂಗನವಾಡಿ ಕೇಂದ್ರ ಸ್ಥಾಪಿಸಲು ಕೇಂದ್ರ ಸಕಾರದ ಅನುಮೋದನೆ ಪಡೆದು ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಅಂಗವಿಕಲರ ವಸತಿನಿಲಯದ ಬಗ್ಗೆ ನೀರಿನ ಕುರಿತಾಗಿ ಸೇರಿದಂತೆ ಹಲವು ಅತ್ಯವಶ್ಯಕ ಅಭಿವೃದ್ಧಿ ವಿಚಾರಗಳನ್ನು ಸಂಬಂಧಿಸಿದ ಸಚಿವರಿಗೆ ಲಿಖಿತವಾಗಿ ವಿವರಿಸಿದ್ದೇವೆ ಎಂದು ಹೇಳಿದರು.
ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿ
ಈ ಭಾಗದ ರೈತರಿಗೆ ನೀರಾವರಿ ಯೋಜನೆಗಳು ಬೇಕಾಗಿದೆ. ನಗರದಲ್ಲಿ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ತುರ್ತಾಗಿ ಆಗಬೇಕಿದೆ. ತಾಲ್ಲೂಕಿನ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು. ಕೌಶಲ್ಯ ತರಬೇತಿ ಕೇಂದ್ರ ಅವಶ್ಯಕತೆ ಇದೆ. ಯುವಕರಿಗೆ ಉದ್ಯೋಗದ ಅವಶ್ಯಕತೆ ಇರುವುದರಿಂದ ‌ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಟೊಮೆಟೊ ಮಾವು ಮತ್ತು ದ್ರಾಕ್ಷಿ ಬೆಳೆಗಳನ್ನು ಅತಿ ಹೆಚ್ಚು ನಮ್ಮ ರೈತರು ಬೆಳೆಯುತ್ತಾರೆ. ಆದರೆ ಬೆಲೆ ಸಿಗದೇ ಕೆಲವು ಬಾರಿ ರಸ್ತೆಗೆ ಬಿಸಾಡುತ್ತಾರೆ ಅಥವಾ ತೋಟದಲ್ಲಿಯೇ ಕೊಳೆಯಲು ಬಿಡುತ್ತಾರೆ. ಆದ್ದರಿಂದ ಈ ಬೆಳೆಗಳಿಗೆ ಪೂರಕ ಘಟಕಗಳು ಅವಶ್ಯಕತೆ ‌ಇರುವುದರಿಂದ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು. ತಾಲ್ಲೂಕಿನ ‌ ವಿವಿದ ಇತಿಹಾಸವನ್ನು‌ ತಿಳಿಸುವ ಸ್ಥಳಗಳು ಮತ್ತು ದಾಖಲೆಗಳನ್ನು ಸಂರಕ್ಷಣೆ ಮಾಡಬೇಕಿದೆ. ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳನ್ನು ಸರ್ಕಾರ ವಿಶೇಷ ಅನುದಾನ ಕೊಟ್ಟು ಸಕಲ ಸೌಲಭ್ಯಗಳೊಂದಿಗೆ ಉನ್ನತ ದರ್ಜೆಗೆ ಏರಿಸಬೇಕು. ಬಿ.ಆರ್.ಅನಂತಕೃಷ್ಣ ಶಿಡ್ಲಘಟ್ಟ *** 100 ಕಿ.ಮೀ ರಸ್ತೆ ಅತ್ಯಂತ ಹೀನಾಯ ಸ್ಥಿತಿಯಲ್ಲಿ... ಸೋರುತಿಹುದು ಮನೆಯ ಮಾಳಿಗೆ ಎಂಬಂತೆ ಶಿಡ್ಲಘಟ್ಟದ ತಾಲ್ಲೂಕು ಆಡಳಿತದ ಕೇಂದ್ರ ಸ್ಥಾನ ಮಿನಿ ವಿಧಾನಸೌಧದ ಪರಿಸ್ಥಿತಿಯಿದೆ. ಕಳಪೆಯಾಗಿ ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಟ್ಟಡವನ್ನು ಪುನರುಜ್ಜೀವಗೊಳಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 100 ಕಿ.ಮೀ ರಸ್ತೆ ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿದ್ದರೆ ಇನ್ನು 150 ಕಿ.ಮೀ ರಸ್ತೆ ದುರಸ್ತಿ ಮಾಡಲೇ ಬೇಕಾಗಿದೆ. ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಮೇಲೆ ಈಗಿರುವ ರೇಷ್ಮೆ ಗೂಡಿನ ಮಾರುಕಟ್ಟೆಯ ಸ್ಥಳದಲ್ಲಿ ಸುಸಜ್ಜಿತವಾದ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಎ.ಎಂ.ತ್ಯಾಗರಾಜ್ ಅಪ್ಪೇಗೌಡನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.