ಚಿಕ್ಕಬಳ್ಳಾಪುರ: ಸರ್ಕಾರದಿಂದ ಜೂ.27ರಂದು ಕೆಂಪೇಗೌಡರ 513ನೇ ಜಯಂತಿ ನಡೆಯಲಿದೆ. ಅಂದು ನಗರದ ಮರುಳಸಿದ್ದೇಶ್ವರ ದೇಗುಲದ ಆವರಣದಿಂದ ಕಾರ್ಯಕ್ರಮ ನಡೆಯುವ ಒಕ್ಕಲಿಗರ ಕಲ್ಯಾಣ ಮಂಟಪದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷಪಿ.ಎನ್.ಕೇಶವರೆಡ್ಡಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಮುದಾಯದವರು ಬೆಳಿಗ್ಗೆ 10ಕ್ಕೆ ಮರುಳಸಿದ್ದೇಶ್ವರ ದೇಗುಲದ ಬಳಿ ಬರಬೇಕು. ಪಲ್ಲಕ್ಕಿಯೊಂದಿಗೆ ಸಾಗಬೇಕು ಎಂದರು.
ಜಯಂತಿ ಸಂಬಂಧ ಎರಡು ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಜಿಲ್ಲಾಧಿಕಾರಿ ಆರ್.ಲತಾ ಮತ್ತಿತರರು ಪಾಲ್ಗೊಳ್ಳುವರು. ಈ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುತ್ತಿದ್ದೇವೆ.ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಆಗಸ್ಟ್ ಅಥವಾ ಸೆಪ್ಟೆಂಬರ್ನಲ್ಲಿಒಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ 2,750 ಕೆ.ಜಿ ತೂಕದ 14 ಅಡಿ ಎತ್ತರ, 16 ಅಡಿ ಅಗಲದ ಕೆಂಪೇಗೌಡರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಜಯಂತಿ ಆಚರಿಸಲಾಗುವುದು. ಆಗ ಒಂದು ಲಕ್ಷ ಜನರನ್ನು ಸೇರಿಸಲಾಗುವುದು.ಆ ಕಾರ್ಯಕ್ರಮದಲ್ಲಿ ಸಮುದಾಯದ ಸಚಿವರು, ಮಠಾಧೀಶರು ಸಹ ಪಾಲ್ಗೊಳ್ಳುವರುಎಂದು ಹೇಳಿದರು.
ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಚನ್ನಪ್ಪರೆಡ್ಡಿ ಮಾತನಾಡಿ, ಪುತ್ಥಳಿಗೆ ಸಂಘದಿಂದ ಹಣ ವೆಚ್ಚ ಮಾಡಿಲ್ಲ. ಸಮುದಾಯದ ಜನರಿಂದ ಹಣ ಸಂಗ್ರಹಿಸಲಾಗಿದೆ. ಇಲ್ಲಿಯವರೆಗೆ ಪುತ್ಥಳಿಗೆ ₹ 34 ಲಕ್ಷ ನೀಡಲಾಗಿದೆ. ಒಟ್ಟು ₹ 70 ಲಕ್ಷ ವೆಚ್ಚವಾಗಲಿದೆ ಎಂದರು.
ಒಕ್ಕಲಿಗರ ಸಂಘದ ನಿರ್ದೇಶಕ ಕೆ.ಪಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಕೆಂಪೇಗೌಡರು ಬೆಂಗಳೂರು ಕಟ್ಟಿದರೂ ಒಕ್ಕಲಿಗರ ಸಮಾಜಕ್ಕೆ ಮಾತ್ರ ಸೀಮಿತ ಆಗಲಿಲ್ಲ. ಬೆಂಗಳೂರಿನಲ್ಲಿ ಉದ್ಯೋಗಕ್ಕೆ ತಕ್ಕಂತೆ ಸರ್ವ ಜನಾಂಗದ ಏಳಿಗೆ ಬಯಸಿದರು.ಪಕ್ಷಾತೀತ ಮತ್ತು ಜಾತ್ಯತೀತವಾಗಿ ಈ ಕಾರ್ಯಕ್ರಮ ಮಾಡಬೇಕು. ಎಲ್ಲ ಜನಾಂಗದವರು ಸೇರಿ ಜಯಂತಿ ಆಚರಿಸಬೇಕು ಎಂದು ಹೇಳಿದರು.
ಸಂಘದ ನಿರ್ದೇಶಕಮೋಹನ್ ಮಾತನಾಡಿ, ಕೆಂಪೇಗೌಡರ ಜಯಂತಿಯಲ್ಲಿ ಐದು ಸಾವಿರ ಜನರು ಪಾಲ್ಗೊಳ್ಳುವರು ಎಂದರು.
ಮುಖಂಡರಾದನಾರಾಯಣ ಸ್ವಾಮಿ, ಎ.ವಿ.ಬೈರೇಗೌಡ ಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.