ADVERTISEMENT

‘ಅಹಿಂದ ಬೆಳ್ಳಿ ತಟ್ಟೆಯಲ್ಲಿ ಸಿದ್ದರಾಮಯ್ಯ ಅಧಿಕಾರ ಉಂಡರು’

ಕಾಂಗ್ರೆಸ್ ವಿರುದ್ಧ ಕೋಟಿಗಾನಹಳ್ಳಿ ರಾಮಯ್ಯ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 14:19 IST
Last Updated 5 ಆಗಸ್ಟ್ 2024, 14:19 IST

ಚಿಕ್ಕಬಳ್ಳಾಪುರ: ‘ಸಿದ್ದರಾಮಯ್ಯ ಅವರೇ ಅಹಿಂದ ಚಳವಳಿಯ ಬೆಳ್ಳಿತಟ್ಟೆಯಲ್ಲಿ ಅಧಿಕಾರ ಉಂಡಿದ್ದೀರಿ. ಈ ಚಳವಳಿ ನಿಮಗೆ ಅಧಿಕಾರ ಕೊಟ್ಟಿದೆ. ಆದರೆ ನೀವು ಯಾವುದೇ ಶ್ರಮಪಟ್ಟಿಲ್ಲ. ದೇವರಾಜ ಅರಸು ಅವರಂತೆ ಜನನಾಯಕರಲ್ಲ. ದಲಿತ ‌‌ಸಮುದಾಯದ ಹೊಟ್ಟೆಯ ಮೇಲೆ ಹೊಡೆಯಬೇಡಿ’ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರರಾದ ಕೋಟಿಗಾನಹಳ್ಳಿ ರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿದ್ದಾರೆ. ಅಷ್ಟೂ ಹಣವನ್ನು ಪರಿಶಿಷ್ಟ ಸಮುದಾಯಗಳಿಗೆ ವಾಪಸ್ ತಂದುಕೊಡಬೇಕು. ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು’ ಎಂದು ಆಗ್ರಹಿಸಿದರು.

‘ಎಸ್‌ಸಿಪಿ ಮತ್ತು ಟಿಎಸ್‌ಪಿ ಹಣಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕು. ನೀವು ಮಾಡಿರುವ ದ್ರೋಹಕ್ಕೆ ಪರಿಶಿಷ್ಟ ಸಮುದಾಯದ ನಮ್ಮ ಮಕ್ಕಳು ಅಭಿವೃದ್ಧಿ ವಿಚಾರದಲ್ಲಿ ಎರಡು ತಲೆಮಾರು ಹಿಂದಕ್ಕೆ ಹೋಗುವರು. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಣ್ಣಾಮುಚ್ಚಾಲೆ ಆಡುವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಅವರು ಮಾತನಾಡುತ್ತಿರುವ ಭಾಷೆ ಸರಿ ಇಲ್ಲ. ದಲಿತರಿಗೆ ದ್ರೋಹ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ದಲಿತರ ಹೆಸರಿನಲ್ಲಿ ಕಾಂಗ್ರೆಸ್ ತನ್ನ ನಾಯಕರ ಕುಟುಂಬಗಳನ್ನು ಬೆಳೆಸುತ್ತಿದೆ. ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಮಹದೇವಪ್ಪ, ಮೋಟಮ್ಮ ಅವರ ಕುಟುಂಬ ಬೆಳೆಸುತ್ತಿದ್ದೀರಿ. ಇವರಾರೂ ದಲಿತ ಚಳವಳಿಗಳಿಗೆ ಬೆವರು ಹರಿಸಿಲ್ಲ. ದಲಿತ ಚಳವಳಿ ಈ ನೆಲದಲ್ಲಿ ದೊಡ್ಡ ತ್ಯಾಗ ಮಾಡಿದೆ. ಇವರಿಗೆ ನಾಯಕತ್ವ ನೀಡಬೇಕಾಗಿತ್ತು. ಆದರೆ ಆ ರೀತಿಯಲ್ಲಿ ಆಗುತ್ತಿಲ್ಲ ಎಂದರು.

ಒಳಮೀಸಲಾತಿ ಹೆಸರಿನಲ್ಲಿ 30 ವರ್ಷಗಳಿಂದ ಪರಿಶಿಷ್ಟ ಸಮುದಾಯವನ್ನು ಎಡಗೈ, ಬಲಗೈ ಎಂದು ವಿಭಜಿಸಿದರು. ಒಳಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಚರಿತ್ರಾರ್ಹವಾದುದು ಎಂದರು. 

‘ಉನ್ನತ ಹುದ್ದೆಗಳಲ್ಲಿರುವ ನಮ್ಮ ಸಮುದಾಯದವರು ಸಮುದಾಯಕ್ಕೆ ಏನು ಮಾಡದೇ ಇರಲಿ. ದ್ರೋಹ ಮಾಡಲಿ ಚಿಂತೆಯಿಲ್ಲ. ಆದರೆ ಕೆನೆಪದರವನ್ನು ಜಾರಿಗೊಳಿಸಬಾರದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.