ಗುಡಿಬಂಡೆ: ತಾಲ್ಲೂಕಿನ ವರ್ಲಕೊಂಡ ಬೆಟ್ಟದಲ್ಲಿ ಮಂಗಳವಾರ ಚಿರತೆಯೊಂದು ಕಾಣಿಸಿಕೊಂಡಿದೆ.
ಕಳೆದ ಎರಡುಮೂರು ದಿನಗಳಿಂದ ಬೆಟ್ಟದಲ್ಲಿ ಕೋತಿಗಳ ಕಿರುಚಾಟ ಕೇಳಿಬರುತ್ತಿತ್ತು. ವರ್ಲಕೊಂಡ ಗ್ರಾಮದ ರಾಜು ಅವರು ಮಂಗಳವಾರ ದ್ರೋನ್ ಕ್ಯಾಮೆರಾ ಬಳಸಿ ಬೆಟ್ಟವನ್ನು ಸರ್ವೆ ಮಾಡಿಸಿದರು. ಈ ಸಮಯದಲ್ಲಿ ಚಿರತೆ ಕಲ್ಲಿನ ಬಂಡೆಯ ಮೇಲೆ ಕಾಣಿಸಿತು. ಚಿರತೆ ಕ್ಯಾಮೆರಾ ಕಡೆ ತಿರುಗಿ ಮತ್ತೆ ಗುಹೆಯೊಳಗೆ ಹೋದ ದೃಶ್ಯವೂ ಸೆರೆಯಾಗಿದೆ.
ಚಿರತೆ ಇರುವುದು ಗೊತ್ತಾಗುತ್ತಿದ್ದಂತೆ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ರಾಜು ಅವರು ಚಿರತೆ ಇರುವ ವಿಡಿಯೊವನ್ನು ವಲಯ ಅರಣ್ಯಾಧಿಕಾರಿ ಮತ್ತು ಪೆರೇಸಂದ್ರ ಪೊಲೀಸರಿಗೆ ಕಳುಹಿಸಿದ್ದಾರೆ.
2021 ಮತ್ತು 2022ರಲ್ಲಿ ಇದೇ ಪ್ರದೇಶದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿತ್ತು. 2022ರಲ್ಲಿ ಮೇಡಿಮಾಕಲಹಳ್ಳಿ ಲಕ್ಷ್ಮಿನಾರಾಯಣರೆಡ್ಡಿ ಅವರ ಕೋಳಿ ಪಾರಂನ ತೋಟದ ಮನೆಯ ನಾಯಿಯ ಮೇಲೆ ದಾಳಿ ಮಾಡಿತ್ತು ಹಾಗೂ ಕುರಿ, ಜಾನುವಾರುಗಳ ಮೇಲೆ ಸಹ ದಾಳಿ ಮಾಡಿತ್ತು.
ಆ ಸಂದರ್ಭದಲ್ಲಿ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆಹಿಡಿಯಲು ಪ್ರಯತ್ನ ಮಾಡಿತ್ತು. ಆದರೆ ಚಿರತೆ ಸೆರೆಯಾಗಲಿಲ್ಲ. ಬೇರೆ ಕಡೆಗೆ ಹೋಗಿರಬಹುದು ಎಂದು ಅಧಿಕಾರಿಗಳು ಸುಮ್ಮನಾಗಿದ್ದರು. ಆದರೆ ಈಗ ಮತ್ತೆ ಮೂರು ಚಿರತೆಗಳು ಬೆಟ್ಟದಲ್ಲಿ ಇವೆ ಎಂದು ವರ್ಲಕೊಂಡ ರಾಜು ತಿಳಿಸಿದ್ದಾರೆ.
ಸ್ಥಳೀಯರು ಅರಣ್ಯ ಇಲಾಖೆಯ ತಕ್ಷಣ ಬೋನು ಇಟ್ಟು ಕ್ರಮಕ್ಕಾಗಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.