ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಕಮ್ಯುನಿಸ್ಟ್ ಹಾಗೂ ಕೃಷಿಕಾರ್ಮಿಕರ ಹೋರಾಟಗಳಿಂದ ಬಡವರಿಗೆ ಭೂಮಿ ಹಂಚಿಕೆಯಾಗಿದೆ. ಶೈಕ್ಷಣಿಕ ಕ್ಷೇತ್ರದ ಪ್ರಗತಿ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಕಮ್ಯುನಿಸ್ಟ್ ಚಳವಳಿಯನ್ನು ಮತ್ತಷ್ಟು ಬಲಗೊಳಿಸಬೇಕು ಎಂದು ಕೃಷಿಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ ಹೇಳಿದರು.
1980ರ ಆಗಸ್ಟ್ 7ರಂದು ನಡೆದ ಪೊಲೀಸ್ ಗೋಲಿಬಾರ್ ನೆನಪಿನಲ್ಲಿ ಪಟ್ಟಣದ ಹುತಾತ್ಮರ ಸ್ತೂಪದ ಬಳಿ ಸಿಪಿಎಂ ತಾಲ್ಲೂಕು ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1980ರಲ್ಲಿ ನರಗುಂದ, ನವಲಗುಂದ ರೈತ ಚಳುವಳಿಯಲ್ಲಿ ಪೊಲೀಸ್ ದೌರ್ಜನ್ಯ ಖಂಡಿಸಿ ತಾಲ್ಲೂಕಿನ ರೈತರು ಮೆರವಣಿಗೆ ಮಾಡಿದ್ದರು. ಶಾಂತಿಯುತ ಹೋರಾಟ ಹತ್ತಿಕ್ಕಲು, ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ, ಪೊಲೀಸ್ ಅಧಿಕಾರಿಗಳು ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಗೋಲಿಬಾರ್ ಮಾಡಿದ್ದರು. ಅದರಲ್ಲಿ ತಾಲ್ಲೂಕಿನ ರೈತರಾದ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಹುತಾತ್ಮರಾಗಿದ್ದರು ಎಂದು ಅವರು ಮಾಹಿತಿ ನೀಡಿದರು.
ಗೋಲಿಬಾರ್ನಲ್ಲಿ ಹುತಾತ್ಮರಾದ ಹಾಗೂ ಭಾಗಿಯಾದವರ ಆದರ್ಶಗಳನ್ನು ಇಂದಿನ ಪೀಳಿಗೆಯವರು ಅನುಸರಿಸಬೇಕು. ಕಾರ್ಮಿಕ ವಿರೋಧಿ ನೀತಿ, ನಿರುದ್ಯೋಗ, ಶಿಕ್ಷಣ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸದ ಸರ್ಕಾರಗಳ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದರು.
ಸಿಪಿಐ(ಎಂ) ತಾಲ್ಲೂಕು ಘಟಕದ ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ ‘ರೈತ ನಾಯಕರ ಆದರ್ಶ, ಆಶಯಗಳ ಈಡೇರಿಕೆಗೆ ಒಗ್ಗಟ್ಟಿನ ಹೋರಾಟ ಅನಿವಾರ್ಯ. ಬಂಡವಾಳಶಾಹಿ, ಖಾಸಗೀಕರಣ, ಉದಾರಿಕರಣ ಹಾಗೂ ಕೋಮುವಾದ ವಿರುದ್ಧ ಹೋರಾಟ ನಡೆಸಬೇಕು’ ಎಂದರು.
ಸಿಪಿಎಂ ಸದಸ್ಯ ಚಟರ್ಜಿ, ಜಿಲ್ಲಾ ಸಮಿತಿ ಸದಸ್ಯ ಎ.ಎನ್. ಶ್ರೀರಾಮಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮನಾಯಕ್, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥಪ್ಪ, ಮುಖಂಡರಾದ ಡಾ.ಅನಿಲ್ ಕುಮಾರ್ ಆವುಲಪ್ಪ, ಬಿ.ಸಾವಿತ್ರಮ್ಮ, ಎಚ್.ಎ.ರಾಮಲಿಂಗಪ್ಪ, ಎಂ.ಎನ್.ರಘುರಾಮರೆಡ್ಡಿ, ಸುರೇಶ್, ಪಿ.ಒಬಳರಾಜು, ಜಯಪ್ಪ, ಪರಗೋಡು ಶ್ರೀನಿವಾಸರೆಡ್ಡಿ, ನಾರಾಯಣಸ್ವಾಮಿ, ನರಸಿಂಹರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.