ಮಂಚೇನಹಳ್ಳಿ: ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ವೈ.ಎ ನಾರಾಯಣ ಸ್ವಾಮಿ ಅವರ ಪತ್ನಿ ಉಷಾ ನಂದಿನಿ ಅವರಿಗೆ ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ನೀಡಿರುವ ಗಣಿಗಾರಿಕೆ ಅನುಮತಿ ರದ್ದುಗೊಳಿಸಬೇಕು. ರೈತರ ಮೇಲೆ ಗುಂಡು ಹಾರಿಸಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಕರೆ ನೀಡಿರುವ ಮಂಚೇನಹಳ್ಳಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಾಲ್ಲೂಕು ಕೇಂದ್ರ ಮಂಚೇನಹಳ್ಳಿಯಲ್ಲಿ ಬೆಳಿಗ್ಗೆಯಿಂದ ಅಂಗಡಿಗಳು ಬಾಗಿಲು ಹಾಕಿವೆ. ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳು ಮಾತ್ರ ತೆರೆದಿವೆ. ರೈತ ಸಂಘದ ಮುಖಂಡರ ಮೆರವಣಿಗೆ ನಡೆಸಿದರು.
ಬಸ್ ನಿಲ್ದಾಣ ಸಮೀಪದ ಗಣೇಶ ಗುಡಿ ಬಳಿ ಬಹಿರಂಗ ಸಮಾವೇಶ ಆರಂಭವಾಗಿದಡ. ವಾಹನಗಳ ಸಂಚಾರ ಯಥಾಸ್ಥಿತಿಯಲ್ಲಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ನಲ್ಲಿ ಭಾಗಿಯಾಗಿವೆ.
ತಾಲ್ಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಈ ಸ್ಥಳಕ್ಕೆ ಗಣಿ ಲಾರಿಗಳ ಸಂಚಾರಕ್ಕೆ ಅನುಕೂಲವಾಗಲು ಇತ್ತೀಚಿಗೆ ರಸ್ತೆ ನಿರ್ಮಿಸಲು ಗಣಿಗಾರಿಕೆಯವರು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿ ರೈತ ರವಿಕುಮಾರ್ ಮೇಲೆ ಸಕಲೇಶ್ ಎಂಬಾತ ಗುಂಡು ಹಾರಿಸಿದ್ದ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಘಟನೆಯು ಶಾಸಕ ಪ್ರದೀಪ್ ಈಶ್ವರ್ ಮತ್ತು ಸಂಸದ ಡಾ.ಕೆ.ಸುಧಾಕರ್ ನಡುವೆ ರಾಜಕೀಯ ಜಟಾಪಟಿಗೂ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.