ADVERTISEMENT

ಮುನಿರೆಡ್ಡಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 3:41 IST
Last Updated 24 ನವೆಂಬರ್ 2020, 3:41 IST
ಚಿಂತಾಮಣಿಯ ಜನಪದ ಕಲಾವಿದ ಮುನಿರೆಡ್ಡಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ನೀಡಲಾಯಿತು
ಚಿಂತಾಮಣಿಯ ಜನಪದ ಕಲಾವಿದ ಮುನಿರೆಡ್ಡಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ನೀಡಲಾಯಿತು   

ಚಿಂತಾಮಣಿ: ಜನಪದ ಕಲಾವಿದ ಚಿಂತಾಮಣಿ ತಾಲ್ಲೂಕಿನ ನಾರಮಾಕಲಹಳ್ಳಿ ಮುನಿರೆಡ್ಡಿಗೆ ಈಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಕಾಡೆಮಿ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ, ಕನ್ನಡ ಮತ್ತು ಸಸ್ಕೃತಿ ಇಲಾಖೆಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಉಪಸ್ಥಿತರಿದ್ದರು.

ನಾರಮಾಕಲಹಳ್ಳಿಯ ಗುಜ್ಜಾರಪ್ಪ ಮತ್ತು ಮುನಿಯಮ್ಮ ದಂಪತಿಯ ಪುತ್ರನಾದ ಮುನಿರೆಡ್ಡಿ ಪದವೀಧರರಾಗಿದ್ದಾರೆ.

ADVERTISEMENT

ಕಳೆದ 30 ವರ್ಷಗಳಿಂದ ಜನಪರ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಇತರೆ ಹಲವಾರು ಭಾಗಗಳಲ್ಲಿ ಜನಪದ ಗಾಯನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಮೂರು ದಶಕಗಳಿಂದ ಜನಪದ ಹಾಡುಗಳನ್ನು ಹಾಡಿ ರಂಜಿಸುತ್ತಿರುವ ಮುನಿರೆಡ್ಡಿ ಇಂದಿಗೂ ಪ್ರತಿಭಾವಂತ ಗಾಯಕರಾಗಿದ್ದಾರೆ. ತಮ್ಮ ಗಾಯನಸುಧೆಯನ್ನು ಯುವಪೀಳಿಗೆಗೆ ತಲುಪಿಸಬೇಕು ಎಂಬುದೇ ಅವರ ಮಹದಾಸೆಯಾಗಿದೆ. ಹೀಗಾಗಿ ಯುವಪ್ರತಿಭೆಗಳನ್ನು ತಮ್ಮ ಜತೆಯಲ್ಲಿ ಪ್ರೋತ್ಸಾಹಿಸುತ್ತಿರುತ್ತಾರೆ.

ಜಾನಪದ ಕ್ಷೇತ್ರವಲ್ಲದೆ ಸಂಪೂರ್ಣ ಸಾಕ್ಷರತಾ ಆಂದೋಲನ ಕಾರ್ಯಕ್ರಮ, ಜಲ ಸಂವರ್ಧನೆ, ಜಲಾನಯನ, ಪರಿಸರ, ಶಾಶ್ವತ ನೀರಾವರಿ ಹೋರಾಟದ ಕಾರ್ಯಕ್ರಮಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಭಾಗವಹಿಸುತ್ತಾರೆ.

ಇವರ ಸೇವೆ ಗುರುತಿಸಿ ಜಿಲ್ಲಾ ಯುವ ಪ್ರಶಸ್ತಿ, ರಂಗಗೌರವ ಪ್ರಶಸ್ತಿ, ಜಾನಪದ ಹುಂಜ ಪ್ರಶಸ್ತಿ, ಸಂಕ್ರಾಂತಿ ಪ್ರಶಸ್ತಿ, ಅಂಕ ಪ್ರಶಸ್ತಿ, ಸಿಜಿಕೆ ರಂಗ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.