ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ನೂತನ ತಹಶೀಲ್ದಾರ್ ಆಗಿ ಸಿ.ಎನ್.ನಾಗಪ್ರಶಾಂತ್ ಅವರು ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು. ಇದೇ ವೇಳೆ ನಿರ್ಗಮಿತ ತಹಶೀಲ್ದಾರ್ ಕೆ.ನರಸಿಂಹಮೂರ್ತಿ ಅವರನ್ನು ಬೀಳ್ಕೊಡಲಾಯಿತು.
ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಅವರು ನರಸಿಂಹಮೂರ್ತಿ ಅವರಿಗೆ ಬೀಳ್ಕೊಟ್ಟು, ನಾಗಪ್ರಶಾಂತ್ ಅವರನ್ನು ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ರಘುನಂದನ್, ‘ಕಳೆದ ಎರಡು ವರ್ಷಗಳಿಗಿಂತಲೂ ಅಧಿಕ ಕಾಲ ಇಲ್ಲಿ ಕಾರ್ಯನಿರ್ವಹಿಸಿದ ನರಸಿಂಹಮೂರ್ತಿ ಅವರು ತಮ್ಮ ಕಾರ್ಯದಕ್ಷತೆ, ಶಿಷ್ಟಚಾರ ಪಾಲನೆಯ ಗುಣದಿಂದಾಗಿ ಇಡೀ ಜಿಲ್ಲೆಗೆ ಮಾದರಿ ಆಗಿದ್ದರು. ಅವರ ಕಾರ್ಯ ನಮ್ಮೆಲ್ಲರಿಗೂ ಮಾದರಿಯಾಗಿದೆ. ಇಲಾಖೆಯ ಸಿಬ್ಬಂದಿ ನಾಗಪ್ರಶಾಂತ್ ಅವರಿಗೂ ಎಂದಿನಂತೆ ತಮ್ಮ ಸಹಕಾರ ನೀಡಬೇಕು’ ಎಂದರು.
ಕೆ.ನರಸಿಂಹಮೂರ್ತಿ ಮಾತನಾಡಿ, ‘ನಾನು ಇಲ್ಲಿ ಕೆಲಸ ನಿರ್ವಹಿಸಿದಷ್ಟು ದಿನ ಸಾರ್ವಜನಿಕರು, ರಾಜಕೀಯ ಮುಖಂಡರು, ರೈತ ಮುಖಂಡರು, ಸಂಘಸಂಸ್ಥೆಗಳ ಮುಖಂಡರು ತುಂಬಾ ಸಹಕಾರ ನೀಡಿದರು. ಜನರ ನೋವಿಗೆ ಸ್ಪಂದಿಸಿ ಮಾಡಿದ ಕೆಲಸ ನನಗೆ ಆತ್ಮತೃಪ್ತಿ ತಂದಿದೆ. ಮುಂದೆಯೂ ಮತ್ತೊಮ್ಮೆ ಈ ಜಿಲ್ಲೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕರೆ ಖಂಡಿತ ಸಂತಸದಿಂದಲೇ ಬರುತ್ತೇನೆ’ ಎಂದು ಹೇಳಿದರು.
ನಾಗಪ್ರಶಾಂತ್ ಮಾತನಾಡಿ, ‘ಈ ಹಿಂದೆ ನರಸಿಂಹಮೂರ್ತಿ ಅವರಿಗೆ ನೀಡಿದಂತೆ ನನಗೂ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ತಾಲ್ಲೂಕು ಮತ್ತು ಜಿಲ್ಲೆಗೂ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಮನ್ವಯದಿಂದ ಕೆಲಸ ಮಾಡುವೆ. ವಿವಿಧ ಇಲಾಖೆಗಳ ಜತೆಗೆ ಸೌಹಾರ್ದಯುತವಾಗಿ ವ್ಯವಹರಿಸುತ್ತ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ತಿಳಿಸಿದರು.
ತಾಲ್ಲೂಕು ಕಚೇರಿಯ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ವಿವಿಧ ಶಾಖೆಗಳ ಮುಖ್ಯಸ್ಥರು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು. 2014ನೇ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿರುವ ನಾಗಪ್ರಶಾಂತ್ ಅವರು ಈ ಹಿಂದೆ ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ತಹಶೀಲ್ದಾರ್ ಆಗಿದ್ದರು. ನರಸಿಂಹಮೂರ್ತಿ ಅವರಿಗೆ ಸರ್ಕಾರ ಈವರೆಗೆ ಬೇರೆಡೆ ಸ್ಥಳ ನಿಯುಕ್ತಿಗೊಳಿಸಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.