ADVERTISEMENT

ಎನ್ಇಪಿ ವಿರುದ್ಧ ಸಂಘಟಿತ ಹೋರಾಟ ಅಗತ್ಯ

ಜಾತ್ಯತೀತ ಭಾರತದ ಉಳಿವಿಗೆ ವಿದ್ಯಾರ್ಥಿ ಯುವಜನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:04 IST
Last Updated 30 ಸೆಪ್ಟೆಂಬರ್ 2022, 3:04 IST
ಬಾಗೇಪಲ್ಲಿಯಲ್ಲಿ ಡಿವೈಎಫ್ ಹಾಗೂ ಎಸ್ಎಫ್ಐನಿಂದ ಶಾಹಿದ್ ಭಗತ್ ಸಿಂಗ್ ಅವರ 115ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ವೇಳೆ ವಿದ್ಯಾರ್ಥಿ ಯುವಜನರ ಮೆರವಣಿಗೆ ಮತ್ತು ಸಮಾವೇಶದಲ್ಲಿ ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಮಾತನಾಡಿದರು
ಬಾಗೇಪಲ್ಲಿಯಲ್ಲಿ ಡಿವೈಎಫ್ ಹಾಗೂ ಎಸ್ಎಫ್ಐನಿಂದ ಶಾಹಿದ್ ಭಗತ್ ಸಿಂಗ್ ಅವರ 115ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ವೇಳೆ ವಿದ್ಯಾರ್ಥಿ ಯುವಜನರ ಮೆರವಣಿಗೆ ಮತ್ತು ಸಮಾವೇಶದಲ್ಲಿ ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಮಾತನಾಡಿದರು   

ಬಾಗೇಪಲ್ಲಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಬಡತನ ರೇಖೆಗಿಂತ ಕೆಳಗಿನ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಲಾಗುತ್ತಿದೆ’ ಎಂದು ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ದೂರಿದರು.

ಶಾಹಿದ್ ಭಗತ್ ಸಿಂಗ್ ಅವರ 115 ನೇ ಜನ್ಮ ದಿನಾಚರಣೆ ಅಂಗವಾಗಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆಯುವಂತೆ, ನಿರುದ್ಯೋಗ ಸಮಸ್ಯೆ ಪರಿಹಾರ, ಜಾತ್ಯತೀತ ಭಾರತದ ಉಳಿವಿಗೆ ಒತ್ತಾಯಿಸಿವಿದ್ಯಾರ್ಥಿ ಯುವಜನರ ಮೆರವಣಿಗೆ ಮತ್ತು ಸಮಾವೇಶ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ಶಿಕ್ಷಣ ನೀತಿಯಲ್ಲಿ ರಾಜಕೀಯ ಬೆರೆಸಬಾರದು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಆಡಳಿತದಲ್ಲಿ ವಿಶ್ವವಿದ್ಯಾಲಯಗಳಲ್ಲಿ ಸಹ ರಾಜಕೀಯ ಬೆರೆಸಿ ಶಿಕ್ಷಣದ ವ್ಯವಸ್ಥೆಯನ್ನು ನೆಲಸಮ ಮಾಡುತ್ತಿವೆ. ಸರ್ಕಾರದ ಯುಜಿಸಿಯ ಕೋಟ್ಯಂತ ರೂಪಾಯಿ ಅನುದಾನವನ್ನು ಶ್ರೀಮಂತರ ವಿಶ್ವವಿದ್ಯಾಲಯಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದರು.

ADVERTISEMENT

ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳು ಸಿಗಲ್ಲ. ಬ್ಯಾಂಕುಗಳಿಂದ ಸಾಲ ಪಡೆದು ಉನ್ನತ ಶಿಕ್ಷಣ ಪಡೆಯಬೇಕಾಗಿದೆ. ಇಡೀ ಶೈಕ್ಷಣಿಕ ವ್ಯವಸ್ಥೆಯನ್ನು ಖಾಸಗಿಕರಣ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಹುನ್ನಾರವಿದು. ಬಿಜೆಪಿ, ಆರ್‌ಎಸ್‍ಎಸ್ ಮನುಧರ್ಮ ಜಾರಿ ಮಾಡಿ ಪ್ರಜಾಪ್ರಭುತ್ವ, ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಷನಲ್ ಕಾಲೇಜಿನ ಮುಖ್ಯರಸ್ತೆಯ ಮುಂದೆ ಬುಧವಾರ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್ ಐ) ನ ತಾಲ್ಲೂಕು ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಡಿವೈಎಫ್ಐ ತಾಲ್ಲೂಕು ಸಂಚಾಲಕ ವೈ.ಎನ್.ಹರೀಶ್, ನಗರ ಸಮಿತಿ ಅಧ್ಯಕ್ಷ ಬಾಲಚಂದ್ರ, ರಫೀವುಲ್ಲಾ, ಅರುಣ್, ಎಸ್‍ಎಫ್ ಐ ರಾಜ್ಯ ಸಮಿತಿ ಸದಸ್ಯರಾದ ಎ.ಸೋಮಶೇಖರ್, ಸುನೀಲ್ ಕುಮಾರ್, ತಾಲ್ಲೂಕು ಅಧ್ಯಕ್ಷ ಸತೀಶ್, ಮುಖಂಡರಾದ ಸಂತೋಷ್, ಪವನ್, ಗಣೇಶ್ ಹಾಗೂ ಕಾಲೇಜುಗಳವಿದ್ಯಾರ್ಥಿಗಳು ಇದ್ದರು.

ಗುಡಿಬಂಡೆಯಲ್ಲೂ ಭಗತ್ ಸಿಂಗ್ ಸ್ಮರಣೆ

ಗುಡಿಬಂಡೆ: ಪಟ್ಟಣದ ಕೆಎಸ್‌ಆರ್‌ಟಿಸಿ ಮುಂಭಾಗ ತಾಲ್ಲೂಕು ಡಿವೈಎಫ್ಐ ಸಂಘಟನೆ ಗುರುವಾರ ಭಾರತದ ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಅವರ 115ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಡಿ.ವೈ.ಎಫ್.ಐ ಮುಖಂಡ ಮುನಿವೆಂಕಟಪ್ಪ ಮಾತನಾಡಿ, ಕ್ರಾಂತಿಕಾರಿ ಭಗತ್ ಸಿಂಗ್ ಅವರ ಅದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಎಂದರು.

ಇತ್ತೀಚಿಗೆ ಸರ್ಕಾರಗಳು ಸಂವಿಧಾನ ತಿರುಚುವ ಕೆಲಸ ಮಾಡುತ್ತಿವೆ. ಹಿಜಾಬ್ ಸೇರಿದಂತೆ ಇನ್ನಿತರ ವಿಚಾರಗಳನ್ನು ಇಟ್ಟುಕೊಂಡು ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿವೆ. ಆದ್ದರಿಂದ ಯುವ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ಭೌತ ವಿಜ್ಞಾನಿ ಚಟರ್ಜಿ, ರೈತ ನಾಯಕ ಮಂಜುನಾಥ್, ಜಯರಾಮರೆಡ್ಡಿ, ಮಹಿಳಾ ನಾಯಕಿ ಸಾವಿತ್ರಮ್ಮ, ಡಿವೈಎಫ್ಐ ತಾಲ್ಲೂಕು ಸಂಚಾಲಕ ಉಪ್ಪಾರಹಲಳ್ಳಿ ಶ್ರೀನಿವಾಸ, ಮುಖಂಡ ಗಂಗರಾಜು, ಅಪ್ರೋಜ್, ರಫಿವುಲ್ಲಾ, ಚಾಂದ್‌ಪಾಷಾ, ಸೋಮಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.