ಗೌರಿಬಿದನೂರು: ರಾಜ್ಯದಾದ್ಯಂತ ಪಕ್ಷ ಸಂಘಟನೆಗಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಹಮ್ಮಿಕೊಂಡ ‘ಪಂಚರತ್ನ’ ರಥಯಾತ್ರೆ ನ. 26ರಂದು ಎಲ್ಲೋಡು ಮೂಲಕ ತಾಲ್ಲೂಕಿಗೆ ಆಗಮಿಸಲಿದೆ ಎಂದು ಜೆಡಿಎಸ್ ಮುಖಂಡ ಸಿ.ಆರ್. ನರಸಿಂಹಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಎಲ್ಲೋಡು ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಾಲ್ಲೂಕಿನ ವಿವಿಧೆಡೆ ಸಾಗಲಿದೆ’ ಎಂದು ಹೇಳಿದರು.
ಎಚ್ಡಿಕೆ ಅವರುತಾಲ್ಲೂಕಿನ ಹೋಬಳಿ ಕೇಂದ್ರಗಳಲ್ಲಿ ಬಹಿರಂಗ ಸಭೆ ನಡೆಸಿ ಜನರ ಜತೆ ಸಮಾಲೋಚಿಸಲಿದ್ದಾರೆ. ಪಂಚರತ್ನ ಯಾತ್ರೆಯ ಪ್ರಮುಖ ಉದ್ದೇಶವಾಗಿರುವ ವಸತಿಯ ಆಸರೆ, ಆರೋಗ್ಯ ಸಂಪತ್ತು, ಶಿಕ್ಷಣವೇ ಆಧುನಿಕ ಶಕ್ತಿ, ರೈತ ಚೈತನ್ಯ ಹಾಗೂ ಯುವ ನವ ಮಾರ್ಗದೊಂದಿಗೆ ಸಾಗಲಿದೆ.
ಎಚ್ಡಿಕೆ ಅವರ ಜತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಜಿಲ್ಲೆ ಮತ್ತು ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ರೂಪಿಸುವ ಪ್ರಣಾಳಿಕೆಯಲ್ಲಿ ಯಾವುದೇ ಸರ್ಕಾರ ನೀಡದ ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಲಾಗುವುದು. ಅವುಗಳನ್ನು ಪಕ್ಷ ಜಾರಿಗೆ ತರಲಿದೆ.ಹೀಗಾಗಿ ತಾಲ್ಲೂಕಿನ ಪಕ್ಷದ ಕಾರ್ಯಕರ್ತರು ಮತ್ತು ನಾಗರಿಕರು ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜೆಡಿಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಮಂಜುನಾಥರೆಡ್ಡಿ ಮತ್ತು ಪಕ್ಷದ ಮುಖಂಡ ಜಾಮಿನ್ ರಜಾ ಮಾತನಾಡಿದರು.
ಗೋಷ್ಠಿಯಲ್ಲಿ ಪಕ್ಷದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಎಚ್.ಪಿ.ನಟರಾಜ್, ಖಜಾಂಚಿ ಕೋಟೆ ಭಾಸ್ಕರ್, ಚಿನ್ನಪ್ಪರೆಡ್ಡಿ, ವೆಂಕಟರವಣಪ್ಪ, ಬೈಪಾಸ್ ನಾಗರಾಜ್, ನಾಸೀರ್, ಮಂಜುನಾಥರೆಡ್ಡಿ, ಪ್ರಭಾಕರ್, ರಾಘವೇಂದ್ರ, ರೈಲ್ವೆ ಬೇಗ್, ಗುಂಡಾಪುರ ಶ್ರೀನಿವಾಸ್, ಗೋಪಾಲರೆಡ್ಡಿ, ಚೇತನ್, ಶಾಂತರಾಜು, ದಿವಾಕರ್ ಗೌಡ, ವೆಳಪಿ ಆನಂದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.