ADVERTISEMENT

ಲಸಿಕೆಗೆ ತಾಂಡ ಜನರ ಹಿಂಜರಿಕೆ

ಪಾರ್ವತಿಪುರ ತಾಂಡದ 6 ಮಂದಿಗೆ ಚುಚ್ಚುಮದ್ದು: ಜಾಗೃತಿ ಮೂಡಿಸಲು ನಿರ್ಧಾರ

ಪಿ.ಎಸ್.ರಾಜೇಶ್
Published 25 ಜೂನ್ 2021, 3:50 IST
Last Updated 25 ಜೂನ್ 2021, 3:50 IST
ಬಾಗೇಪಲ್ಲಿ ತಾಲ್ಲೂಕಿನ ಪಾರ್ವತಿಪುರ ತಾಂಡದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣಾ ನಾಯಕ್ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು
ಬಾಗೇಪಲ್ಲಿ ತಾಲ್ಲೂಕಿನ ಪಾರ್ವತಿಪುರ ತಾಂಡದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣಾ ನಾಯಕ್ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರು   

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿಯ ಪಾರ್ವತಿಪುರ ತಾಂಡದಲ್ಲಿ ಇರುವ 18 ವರ್ಷ ಮೇಲ್ಪಟ್ಟವರ ಸಂಖ್ಯೆ 259. ಈ ಪೈಕಿ ಕೇವಲ 6 ಮಂದಿ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿದರೆ ಜ್ವರ ಬರುತ್ತದೆ, ಮೈ-ಕೈ ನೋವಾತ್ತದೆ, ಮದ್ಯಪಾನ ಬಿಡಬೇಕು ಎಂದು ಜನರಲ್ಲಿ ಸುಳ್ಳು ವದಂತಿ, ಅಪನಂಬಿಕೆ ಮೂಡಿರುವುದೇ ಲಸಿಕೆ ಅಭಿಯಾನದ ಹಿನ್ನಡೆಗೆ ಕಾರಣವಾಗಿದೆ.

ಗೂಳೂರು ಕೇಂದ್ರದಿಂದ 4 ಕಿ.ಮೀ ದೂರ ಕ್ರಮಿಸಿದರೆ ಪಾರ್ವತಿಪುರ ತಾಂಡ ಸಿಗುತ್ತದೆ. ತಾಲ್ಲೂಕಿನ ಸದ್ದಪಲ್ಲಿ ತಾಂಡ, ಪಾರ್ವತಿಪುರ ತಾಂಡ, ಟೆಂಪಯ್ಯಕುಂಟ ತಾಂಡ, ಬೂರಗಮಡುಗು ತಾಂಡ ಸೇರಿದಂತೆ ಕೆಲವು ತಾಂಡಗಳು ಬೆಟ್ಟಗುಡ್ಡಗಳ ಅಕ್ಕಪಕ್ಕದಲ್ಲಿದ್ದು, ಲಂಬಾಣಿ ಸಮುದಾಯದವರು ವಾಸವಾಗಿದ್ದಾರೆ. ಹಳೆಯ ಸಂಪ್ರದಾಯಗಳನ್ನು ಇಂದಿಗೂ ಅವರು ಅನುಸರಿಸುತ್ತಾರೆ. ಕೆಲವರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಮತ್ತೆ ಕೆಲವರು ತಾಂಡಗಳನ್ನು ತೊರೆದು ಉದ್ಯೋಗ ಅರಸಿ ಬೆಂಗಳೂರು, ಬಾಂಬೆ, ದೆಹಲಿಗೆ ಹೋಗಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಕೂಲಿಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಪಾರ್ವತಿಪುರ ತಾಂಡದಲ್ಲಿ 80 ಮನೆಗಳಿವೆ. ಮೊದಲ ಅಲೆಯಲ್ಲಿ ಈ ತಾಂಡದಲ್ಲಿ 18 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಗ್ರಾಮ ಪಂಚಾಯಿತಿ ಸದಸ್ಯರೊಬ್ಬರಿಗೆ ಸೋಂಕು ಹರಡಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಇದನ್ನೇ ಇಲ್ಲಿನ ಜನರು ನೆಪ ಮಾಡಿಕೊಂಡು ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ, ಮೈ-ಕೈ ನೋವಾಗುತ್ತದೆ ಎಂದು ಸುಳ್ಳು ವದಂತಿ ನಂಬಿಕೊಂಡು ಕಾಲದೂಡುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿ, ಆರೋಗ್ಯ ಸಿಬ್ಬಂದಿ ತಾಂಡಗೆ ಭೇಟಿ ನೀಡಿದರೆ ಜನರು ಹೆದರಿ ಓಡಿಹೋಗಿ ಅಕ್ಕಪಕ್ಕದ ಬೆಟ್ಟಗುಡ್ಡಗಳಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದಾರೆ.

ADVERTISEMENT

ಸ್ಥಳೀಯ ಆಡಳಿತ ಹಾಗೂ ಕಾರ್ಯಪಡೆ ಜನರಲ್ಲಿ ಪರಿಣಾಮಕಾರಿಯಾಗಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಹಿಂದೇಟು ಹಾಕಿದೆ ಎಂಬುದು ಸಾಮಾನ್ಯ ಆರೋಪ.

‘ನಾನು ಪಾರ್ವತಿಪುರ ತಾಂಡ ನಿವಾಸಿ. ಲಸಿಕೆ ಹಾಕಿಸಿಕೊಂಡು, ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಯುವಕರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಅಪನಂಬಿಕೆ ಹಾಗೂ ಸುಳ್ಳು ವದಂತಿಗೆ ಕಿವಿಕೊಡದೆ ಲಸಿಕೆ ಹಾಕಿಸುವಂತೆ ಪ್ರತಿನಿತ್ಯ ಮನೆ ಮನೆಗೂ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದೇನೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಾಮನಾಯಕ್ ತಿಳಿಸಿದರು.

‘ಆರೋಗ್ಯ ಸಿಬ್ಬಂದಿ ಕಾಣಿಸಿದರೆ ಜನರು ಹೆದರಿ ಓಡುತ್ತಿದ್ದಾರೆ. ಜಾಗೃತಿ ಮೂಡಿಸಲು ಕ್ರಮ ವಹಿಸಲಾಗಿದೆ. ಕೆಲವರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.