ADVERTISEMENT

ಖೋಟಾ ನೋಟು ಮುದ್ರಣ ಪ್ರಕರಣ: ಮತ್ತೊಬ್ಬ ಬಂಧನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:58 IST
Last Updated 2 ಫೆಬ್ರುವರಿ 2023, 6:58 IST

ಚಿಂತಾಮಣಿ: ನಗರದ ಹೊರವಲಯದ ಗಾಂಧಿನಗರ- ಊಲವಾಡಿ ರಸ್ತೆಯ ಹಳೆಯ ಕಟ್ಟಡದಲ್ಲಿ ಖೋಟಾನೋಟು ಮುದ್ರಣ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮತ್ತೊಬ್ಬ ಆರೋಪಿ ಜಂಗಮಶೀಗೇಹಳ್ಳಿಯ ದೇವರಾಜ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಜನವರಿ 19ರಂದು ಬಾರ್ನ್ ಫೌಂಡೇಷನ್ ಹಳೆಯ ಕಟ್ಟಡದಲ್ಲಿ ಖೋಟಾನೋಟು ಮುದ್ರಣ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳಾದ ಬೆಂಗಳೂರಿನ ಹೆಗ್ಗಡೆ ನಗರದ ಶೇಖ್ ಹಿದಾಯತ್, ದಾವೂದ್ ವಸೀಂ ಮತ್ತು ಚಿಂತಾಮಣಿ ತಾಲ್ಲೂಕಿನ ಗಾಜಲಹಳ್ಳಿಯ ಜಿ.ಕೆ.ಶಿವಾ ಎಂಬುವವರನ್ನು ಬಂಧಿಸಿದ್ದರು. ₹2 ಸಾವಿರ ಮುಖಬೆಲೆಯ ಸುಮಾರು ₹1.29 ಕೋಟಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು.

ADVERTISEMENT

ಎಎಸ್ಪಿ ಕುಶಾಲ್ ಚೌಕ್ಸೆ ನೇತೃತ್ವದಲ್ಲಿ ತನಿಖೆ ನಡೆಸಿದ್ದರು. ಶ್ರೀನಿವಾಸಪುರ ಶಂಕರಪ್ಪ ಮತ್ತು ಚಿಂತಾಮಣಿಯ ರಾಜಣ್ಣ ಅವರ ತನಿಖೆ ನಡೆಸುತ್ತಿರುವಾಗ ದೇವರಾಜ್ ಅವರಿಗೆ ಸಹಾಯ ಮಾಡಿರುವ ಮಾಹಿತಿ ಲಭಿಸಿದೆ. ಜಮೀನು ಕೊಡಿಸುವುದು ಮತ್ತಿತರ ದೂರುಗಳ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ಕುಶಾಲ್ ಚೌಕ್ಸೆ ಪ್ರಜಾವಾಣಿಗೆ ತಿಳಿಸಿದರು.

ಇದುವರೆಗೂ ಖೋಟಾನೋಟುಗಳ ಮುದ್ರಣದಲ್ಲಿ ಅವರ ಕೈವಾಡ ಇದೆಯೇ ಅಥವಾ ಇಲ್ಲವೇ? ಯಾವ ಕಾರಣಕ್ಕಾಗಿ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಹೊರಬರಬೇಕಾಗಿದೆ. ಸದ್ಯಕ್ಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.