ADVERTISEMENT

ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರ

ಶಂಕುಸ್ಥಾಪನೆಗೆ ವಿರೋಧ; ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಸಂಘ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 4:31 IST
Last Updated 26 ಜುಲೈ 2025, 4:31 IST
ಗೌರಿಬಿದನೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರ ಸಂಘದ ಮುಖಂಡರು
ಗೌರಿಬಿದನೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರ ಸಂಘದ ಮುಖಂಡರು   

ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ನೀರು ಹರಿಸಲು ಶಾಸಕರು ಕಳೆದ ವರ್ಷದಿಂದಲೂ ಪ್ರಸ್ತಾಪ ಮಾಡುತ್ತಿದ್ದಾರೆ. ಭೂಮಿ ಪೂಜೆ ನೆರವೇರಿಸಲು ಅವಕಾಶ ನೀಡುವುದಿಲ್ಲ. ಹೋರಾಟ ಮಾಡುತ್ತೇವೆ ಎಂದು ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಟದಹೊಸಹಳ್ಳಿ ಮತ್ತು ನಗರಗೆರೆ ಹೋಬಳಿ ಜನರು ಕೃಷಿ ಮತ್ತು ಹೈನುಗಾರಿಕೆಯಿಂದ ಜೀವನ ನಡೆಸುತ್ತಿದ್ದಾರೆ. ಶಾಸಕರು ಎಲ್ಲವನ್ನು ಹಣದಿಂದ ನೋಡುತ್ತಾರೆ. ಎತ್ತಿನ ಹೊಳೆ ನೀರು ಕಾಮಗಾರಿ ಮುಗಿದು ಎರಡು ವರ್ಷ ಕಳೆದಿದೆ. ಆದರೆ ನೀರು ಈವರೆಗೆ ಬಂದಿಲ್ಲ. ಜು.26 ರಂದು ಗುದ್ದಲಿ ಪೂಜೆ ಮಾಡುವುದಾಗಿ ತಿಳಿಸಿದ್ದಾರೆ. ನಾವು  ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

ವಾಟದಹೊಸಹಳ್ಳಿ ಕೆರೆ ನೀರಿನ ಸಂಗ್ರಹಣೆ ಸಾಮರ್ಥ್ಯ ಕಳೆದುಕೊಂಡಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯವರು ತಿಳಿಸಿದ್ದಾರೆ. ಶಂಕು ಸ್ಥಾಪನೆ ದಿನದಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು. ಆ.5 ರಂದು ವಾಟದಹೊಸಹಳ್ಳಿಯಿಂದ ನಗರಕ್ಕೆ ಪಾದಯಾತ್ರೆ ಕೈಗೊಂಡು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ADVERTISEMENT

ಮುಖಂಡ ಮಧು ಸೂದನ್ ರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಗುದ್ದಲಿ ಪೂಜೆ ಮಾಡಿ ನಗರಕ್ಕೆ ನೀರು ಹರಿಸುವ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಆದರೆ ನಗರಗೆರೆ ಹೋಬಳಿಯ ಜನರ ಮಾತು ಕೇಳಿಸುತ್ತಿಲ್ಲವೇ? ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಗರಕ್ಕೆ ವಾಟದಹೊಸಹಳ್ಳಿ ನೀರನ್ನು ಹರಿಸಲು ಬಿಡುವುದಿಲ್ಲ ಎಂದರು.

ನಗರಗೆರೆ ಹೋಬಳಿಯ ರೈತರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವವರೆಗೂ ನಗರಕ್ಕೆ ನೀರನ್ನು ಬಿಡುವುದಿಲ್ಲ. ನಮ್ಮ ಪ್ರಾಣ ಹೋದರೂ ಸರಿಯೇ ಎಂದರು.

ರ್ಷವರ್ಧನ್ ರೆಡ್ಡಿ, ಕೆಂಪ ರಂಗಪ್ಪ ಮತ್ತಿತರರು ಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.