ಗುಡಿಬಂಡೆ: ತಾಲ್ಲೂಕು ಕಂದಾಯ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಯಿಂದ ಉಲ್ಲೋಡು ಗ್ರಾಮ ಪಂಚಾಯಿತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ಮತ್ತು ಸರ್ಕಾರದಿಂದ ವಿವಿಧ ಇಲಾಖೆಗಳ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಶುಕ್ರವಾರ ಸವಲತ್ತು ವಿತರಣೆ ಮಾಡಲಾಯಿತು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತರುವುದು ನಿಮ್ಮ ಹಕ್ಕು. ಸಮಸ್ಯೆಗಳ ಕುರಿತು ನೇರವಾಗಿ ಗಮನಕ್ಕೆ ತರಬೇಕು ಎಂದರು.
175 ಅರ್ಜಿ ಬಂದಿದ್ದು ಇದರಲ್ಲಿ ಅತಿ ಹೆಚ್ಚು ಕಂದಾಯ ಇಲಾಖೆ ಸಂಬಂಧಪಟ್ಟ ನಿವೇಶನ ರಹಿತರು ಹಾಗೂ ಬೆಸ್ಕಾಂ ಸಮಸ್ಯೆ ಹೆಚ್ಚಾಗಿದೆ. ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಸಿಬ್ಬತುಲ್ಲಾ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ನಮೂನೆ 50, 51, 53, 57ನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದರು.
ತಾಲ್ಲೂಕಿನ ಬೀಚಗಾನಹಳ್ಳಿ ಪಶು ಆಸ್ಪತ್ರೆಯ ಕಟ್ಟಡ, ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿ ಉದ್ಘಾಟನೆ ಮಾಡಲಾಯಿತು. ಗುಡಿಬಂಡೆ ರಾಮಪಟ್ಟಣ ರಸ್ತೆಯ ಅಭಿವೃದ್ಧಿಗೆ ಭೂಮಿಪೂಜೆ ಹಾಗೂ ಉಲ್ಲೋಡು ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ, ಗೇರುಮರದ ಹಳ್ಳಿ ಗ್ರಾಮದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ, ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲಾಯಿತು.
ಇಒ ನಾಗಮಣಿ, ಪಶು ಇಲಾಖೆಯ ಸುಬ್ರಮಣಿ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮಿಪತಿ ರೆಡ್ಡಿ, ನವೀನ್, ಆದಿರೆಡ್ಡಿ, ಎಚ್ಪಿ ಲಕ್ಷ್ಮಿನಾರಾಯಣ, ಬ್ರಹ್ಮಣರಹಳ್ಳಿ ಮೂರ್ತಿ, ರಾಜರೆಡ್ಡಿ, ರಮೇಶ್, ಪ್ರಕಾಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.