ಚಿಂತಾಮಣಿ: ‘ತಾಲ್ಲೂಕಿನ ಮುರುಗಮಲ್ಲ ಗ್ರಾಮ ಪಂಚಾಯಿತಿಯಲ್ಲಿ ಕೆಲವು ಸದಸ್ಯರಿಗೆ ಹಣದ ಅಮಿಷ ಒಡ್ಡಿ ಖರೀದಿಸಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅನ್ಸರ್ ಖಾನ್ ಆರೋಪಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಮಾಜಸೇವೆಯ ನೆಪದಲ್ಲಿ ಅನ್ಯ ಪಕ್ಷದವರನ್ನು ಖರೀದಿಸುವ ಕುದುರೆ ವ್ಯಾಪಾರವನ್ನು ನಿಲ್ಲಿಸಬೇಕು. ಪ್ರಾಮಾಣಿಕ ರಾಜಕಾರಣವನ್ನು ಮಾಡಿ ಅಧಿಕಾರ ಪಡೆಯಬೇಕು’ ಎಂದು ಆಗ್ರಹಿಸಿದರು.
‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಸ್ಪಷ್ಟ ಬಹುಮತ ಪಡೆದಿದ್ದರು. ಅಧ್ಯಕ್ಷ ಚುನಾವಣೆಯಲ್ಲಿ ಸಮಾಜಸೇವೆಯ ಹೆಸರಿನಲ್ಲಿ ಲಕ್ಷಾಂತರ ಹಣದ ಅಮಿಶ ಒಡ್ಡಿ ಮೂವರು ಸದಸ್ಯರನ್ನು ಸೆಳೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ, ‘ಚುನಾವಣೆಯಲ್ಲಿ ಒಂದು ಕಡೆಯಿಂದ ಜಯಗಳಿಸಿ ಅಧ್ಯಕ್ಷ ಚುನಾವಣೆಯಲ್ಲಿ ಮತ್ತೊಂದು ಗುಂಪಿಗೆ ಮತ ನೀಡುವುದು ಅನೈತಿಕವಾಗಿದೆ. ಮುರುಗಮಲ್ಲ ಗ್ರಾಮದಲ್ಲಿ ಹಿಂದಿನಿಂದಲೂ ಹಿಂದು-ಮುಸ್ಲಿಂ ಭಾವೈಕ್ಯದಿಂದ ಜನರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ. ಇದೇ ವಾತಾವರಣವನ್ನು ಮುಂದುವರೆಸಿಕೊಂಡು ಹೋಗಬೇಕು’ ಎಂದರು.
ಎಪಿಎಂಸಿ ಅಧ್ಯಕ್ಷ ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಮಂಜುನಾಥರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಉಪ್ಪರಪೇಟೆಯ ಗ್ರಾಮ ಪಂಚಾಯಿತಿ ಸದಸ್ಯ ಏಜಾಜ್ ಪಾಷಾ, ನೂತನ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರಪ್ಪ, ಮೂರ್ತಿ, ನರೇಶ್, ಶಾರದಮ್ಮ, ರಾಜಣ್ಣ, ರೆಡ್ಡಮ್ಮ, ನಾರಾಯಣಸ್ವಾಮಿ, ಬಿ.ಅಮೀರ್ ಜಾನ್, ಕೃಷ್ಣಾರೆಡ್ಡಿ, ಮುಖಂಡರಾದ ನರಸಿಂಹಮೂರ್ತಿ, ಲಕ್ಷ್ಮಣ್ಣ, ಅಬ್ಜದ್ ಖಾನ್, ಸರ್ದಾರ್ ಖಾನ್, ಆರೀಫ್ ಖಾನ್, ಶ್ರೀನಿವಾಸರೆಡ್ಡಿ, ಶಂಕರಪ್ಪ, ರವಿ, ರಾಧಾಕೃಷ್ಣಶೆಟ್ಟಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.