ಚಿಕ್ಕಬಳ್ಳಾಪುರ: ‘ಐಟಿ ಮತ್ತು ಇಡಿ ದಾಳಿಗೆ ಭಯಪಟ್ಟು ಅನರ್ಹ ಶಾಸಕರು ಬಿಜೆಪಿ ಸೇರಿ, ಇದೀಗ ಅಭಿವೃದ್ಧಿಗೆ ಸಹಕಾರ ಸಿಕ್ಕಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ’ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.
ನಗರದಲ್ಲಿ ಬುಧವಾರ ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ಗೆ ದ್ರೋಹ ಮಾಡಿ ಹೋದ ಅನರ್ಹ ಶಾಸಕರು ಮಾಡಿಸಿಕೊಂಡಷ್ಟು ಕೆಲಸ ಯಾವ ಸಚಿವರೂ ಮಾಡಿಸಿಕೊಂಡಿಲ್ಲ. ದುರಾದೃಷ್ಟ ಪಕ್ಷದಲ್ಲಿ ಹೆಚ್ಚು ಅನುಕೂಲ ಪಡೆದುಕೊಂಡವರೇ ಇವತ್ತು ಪಕ್ಷಕ್ಕೆ ದ್ರೋಹ ಮಾಡಿದರು. ಅನರ್ಹ ಶಾಸಕರು ಅಧಿಕಾರ ದಾಹಕ್ಕೆ ಪಕ್ಷಾಂತರ ಮಾಡಿದ್ದಾರೆ ವಿನಾ ಯಾವ ಅಭಿವೃದ್ಧಿಗಲ್ಲ’ ಎಂದು ಟೀಕಿಸಿದರು.
‘ಶಿವಶಂಕರೆಡ್ಡಿ ಅವರು ಸಚಿವರಾಗಲು 25 ವರ್ಷ ಬೇಕಾಯಿತು. ಆದರೆ ಪಕ್ಷದ ಹಿರಿಯ ಶಾಸಕರನ್ನು ಕಡೆಗಣಿಸಿ ಅನರ್ಹ ಶಾಸಕ ಡಾ.ಕೆ. ಸುಧಾಕರ್ ಅವರನ್ನು ಸಚಿವರನ್ನಾಗಿ ಮಾಡಲು ನಾವೆಲ್ಲಾ ಒಪ್ಪಿಕೊಂಡಿದ್ದೆವು. ಇಷ್ಟೆಲ್ಲ ಮಾಡಿದರೂ ಕೊನೆಗೆ ಪಕ್ಷಕ್ಕೆ ದ್ರೋಹ ಮಾಡಿದರು. ಇದೀಗ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುವ ಕೆಲಸ ಮಾಡುತ್ತಿದ್ದಾರೆ. ಜನರು ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.