ADVERTISEMENT

ಗಂಗಾಧರೇಶ್ವರ ಸ್ವಾಮಿ ರಥೋತ್ಸವ ಸಂಭ್ರಮ

ಜಂಗಮಕೋಟೆ; ಮೆರವಣಿಗೆಯಲ್ಲಿ ಕಲಾ ತಂಡಗಳಿಂದ ವೈಭವದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 14:12 IST
Last Updated 25 ಏಪ್ರಿಲ್ 2019, 14:12 IST
ಜಂಗಮಕೋಟೆಯ ಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು
ಜಂಗಮಕೋಟೆಯ ಗಂಗಾಧರೇಶ್ವರ ಸ್ವಾಮಿ ಬ್ರಹ್ಮರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು   

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆಯ ಗಂಗಾಧರೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವನ್ನು ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಉತ್ತರಾಯಣ ವಸಂತ ಋತು ಚೈತ್ರ ಮಾಸ ಕೃಷ್ಣಪಕ್ಷ ಸಪ್ತಮಿಯಂದು ಗಂಗಾಧರೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತದೆ. ತೇರಿನಲ್ಲಿ ಉತ್ಸವ ಮೂರ್ತಿಗಳನ್ನಿರಿಸಿ, ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಬಂದಿದ್ದರು. ಗ್ರಾಮದಲ್ಲಿ ರಥ ಸಾಗಿದಾಗ ಸಾಕಷ್ಟು ಜನಜಂಗುಳಿ ಏರ್ಪಟ್ಟಿತ್ತು. ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ ನಂತರ ಪ್ರಸಾದ ವಿತರಿಸಲಾಯಿತು.

ADVERTISEMENT

ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರುಬೇಳೆ ವಿತರಿಸಲಾಯಿತು. ಮೆರವಣಿಗೆಯಲ್ಲಿ ವೀರಗಾಸೆ, ಕರಡಿ ಮೇಳ ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿದ್ದವು. ಗಾರ್ಡಿ ಗೊಂಬೆ, ಕೀಲು ಕುದುರೆ ಮುಂತಾದ ಆಕರ್ಷಕ ಸ್ಥಳೀಯ ಕಲೆಯು ಕೂಡ ಮೆರವಣಿಗೆಯಲ್ಲಿದ್ದವು. ತಮಟೆ ವಾದನಕ್ಕೆ ಭಕ್ತರು ಹೆಜ್ಜೆಹಾಕುತ್ತಾ ಮತ್ತಷ್ಟು ಸೊಬಗು ತಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯರಾದ ಜೆ.ಟಿ.ನಾಗರಾಜ, ವೆಂಕಟೇಶ್, ಅಭಿವೃದ್ಧಿ ಅಧಿಕಾರಿ ವಜ್ರೇಶ್ ಕುಮಾರ್ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು.

ದೇವಾಲಯದ ಆವರಣದಲ್ಲಿ ಹೋಮಕುಂಡವನ್ನು ಮಾಡಿ, ಲೋಕ ಕಲ್ಯಾಣಾರ್ಥ ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣಿಗೆ ದವನ ಸಿಕ್ಕಿಸಿ ರಥಕ್ಕೆ ಎಸೆಯುವುದರ ಮೂಲಕ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.

ಗಂಗಾಧರೇಶ್ವರಸ್ವಾಮಿ ಟ್ರಸ್ಟ್ ಸಂಚಾಲಕ ಮೆಡಿಕಲ್ ಮಂಜು ಮಾತನಾಡಿ, ‘ಧಾರ್ಮಿಕವಾದ ಕಾರ್ಯಕ್ರಮಗಳಿಂದ ಮಾತ್ರ ಜನರಿಗೆ ಶಾಂತಿ ದೊರೆಯಲು ಸಾಧ್ಯ. ಬಯಲು ಸೀಮೆಯ ಜನರು ತೀವ್ರವಾದ ಮಳೆಯ ಕೊರತೆ ಎದುರಿಸುತ್ತಿದ್ದಾರೆ. ಜನರಿಗೆ ಭಗವಂತ ಈ ವರ್ಷದಲ್ಲಿಯಾದರೂ ಉತ್ತಮವಾದ ಮಳೆ ಬೆಳೆಗಳನ್ನು ಕೊಟ್ಟು ಬಯಲು ಸೀಮೆಯ ಜನ, ಜಾನುವಾರುಗಳನ್ನು ಸುಭಿಕ್ಷವಾಗಿರಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.