ಶಿಡ್ಲಘಟ್ಟ: ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿದ್ದ ಹಳೆಯ ಕುಂಟೆಗಳನ್ನು ನರೇಗಾ ಯೋಜನೆಯಡಿ ಸುಂದರ ನೀರಿನ ಹೊಂಡಗಳಾಗಿ ಅಭಿವೃದ್ಧಿಪಡಿಸಲಾಗಿದೆ. ನೀರು ತುಂಬಿಕೊಂಡಿರುವ ಈಹೊಂಡಗಳು ಬೇಸಿಗೆ ಸೇರಿದಂತೆ ಇಡೀ ವರ್ಷ ಆಯಾ ಗ್ರಾಮದ ಜನ, ಜಾನುವಾರುಗಳಿಗೆ ನೀರಿನ ಅಕ್ಷಯ ಪಾತ್ರೆಗಳಾಗಿವೆ.
ತಾಲ್ಲೂಕಿನ ಬೆಳ್ಳೂಟಿ, ಚೀಮಂಗಲ, ಸದ್ದಹಳ್ಳಿ, ಮಳಮಾಚನಹಳ್ಳಿ, ಈ. ತಿಮ್ಮಸಂದ್ರ, ಸುಂಡ್ರಹಳ್ಳಿ, ಎದ್ದಲತಿಪ್ಪೇನಹಳ್ಳಿ, ಹೊಸಪೇಟೆ, ಹಿರೇಬಲ್ಲ, ಚೌಡಸಂದ್ರ, ಕೊತ್ತನೂರು, ವೀರಾಪುರ, ಬಳುವನಹಳ್ಳಿ, ಭಕ್ತರಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ಹಾರಡಿ, ಕಾಳನಾಯಕನಹಳ್ಳಿ, ಮಲ್ಲೇನಹಳ್ಳಿ ಮುಂತಾದ ಕಡೆಯಲ್ಲಿ ಈಗಾಗಲೇ ನಿರ್ಮಾಣಗೊಂಡು ಮಳೆನೀರು ತುಂಬಿಕೊಂಡಿರುವ ನೀರಿನ ಹೊಂಡಗಳು ತಮ್ಮ ಉಪಯುಕ್ತತೆಯನ್ನು ಸಾರುತ್ತಿವೆ.
ಹಳ್ಳಿಗಳಲ್ಲಿ ಪಾಳುಬಿದ್ದ ಕುಂಟೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿ ಮಳೆ ನೀರು ಸಮರ್ಪಕವಾಗಿ ಶೇಖರಣೆಯಾಗುವಂತೆ ನೀರಿನ ಹೊಂಡಗಳಾಗಿ ನಿರ್ಮಿಸಲಾಗಿದೆ. ಇವುಗಳಿಂದ ಒಂದೆಡೆ ಅಂತರ್ಜಲ ವೃದ್ಧಿ, ಮತ್ತೊಂದೆಡೆ ಜನ, ಜಾನುವಾರುಗಳಿಗೆ ನಿರಂತರವಾಗಿ ನೀರು ಸಿಗುವಂತಾಗಿದೆ. ಹಿಂದೆಲ್ಲಾ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಿದ್ದ ಹಲವಾರು ಹಳ್ಳಿಗಳಿಗೆ ಈ ನೀರಿನ ಹೊಂಡಗಳು ವರದಾನವಾಗಿ ಪರಿಣಮಿಸಿವೆ.
ಹಾರಡಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಹೊಂಡವು ಷಡ್ಭುಜ ಆಕಾರದಲ್ಲಿದೆ. ಅದರ ಸುತ್ತ ಪಾದಚಾರಿಗಳು ನಡೆದಾಡಲು ಪಥ ನಿರ್ಮಿಸಲಾಗಿದೆ. ಇದು ಸುಮಾರು 64 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡವು 85 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ.
ಹೊಸಪೇಟೆ ತಾಲ್ಲೂಕಿನ ಮಲ್ಲೇನಹಳ್ಳಿಯಲ್ಲಿನ ನೀರಿನ ಹೊಂಡವು ಈಜುಕೊಳದಂತೆ ಸುಂದರವಾಗಿದ್ದು, 76 ಲಕ್ಷ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಅಪ್ಪೇಗೌಡನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನೀರಿನ ಹೊಂಡವು 27 ಗುಂಟೆ ವಿಸ್ತೀರ್ಣ ಹೊಂದಿದ್ದು, ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ನೀರಿನ
ಹೊಂಡವಾಗಲಿದೆ.
ಸೋಲಾರ್ ದೀಪ ಅಳವಡಿಕೆ: ತಾಲ್ಲೂಕಿನ ಹಾರಡಿ ಮತ್ತು ಕಾಳನಾಯಕನಹಳ್ಳಿಯಲ್ಲಿನ ನೀರಿನ ಹೊಂಡದ ಸುತ್ತ ಸೋಲಾರ್ ದೀಪಗಳನ್ನು ಗ್ರಾಮ ಪಂಚಾಯಿತಿಯಿಂದ ಅಳವಡಿಸಲಾಗಿದೆ. ರಾತ್ರಿ ವೇಳೆ ದೂರದಿಂದ ನೋಡಿದರೆ ಕ್ರಿಕೆಟ್ ಸ್ಟೇಡಿಯಂ ರೀತಿ ಇವು ಕಾಣುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.