ADVERTISEMENT

ಶ್ರೀಗಂಧ ಕಳವು: ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 2:15 IST
Last Updated 5 ಜನವರಿ 2022, 2:15 IST
ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಶ್ರೀಗಂಧ ಕಳ್ಳತನ ಮಾಡಿದ ಆರೋಪಿಗಳನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ
ಚಿಂತಾಮಣಿ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಶ್ರೀಗಂಧ ಕಳ್ಳತನ ಮಾಡಿದ ಆರೋಪಿಗಳನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ   

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ, ಬಟ್ಲಹಳ್ಳಿ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ರೈತರು ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ 7 ಮಂದಿಯನ್ನು ಚಿಂತಾಮಣಿ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂತಾಮಣಿ ತಾಲ್ಲೂಕಿನ ದಬರಗಾನಹಳ್ಳಿಯ ಮುನಿರಾಜು, ಪ್ರಸನ್ನ, ಪ್ರದೀಪ್, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮುನಿಯಪ್ಪ, ಹೊಸಕೋಟೆ ತಾಲ್ಲೂಕಿನ ಕಟ್ಟಿಗೇನಹಳ್ಳಿಯ ಮಹಮ್ಮದ್ ಇಸ್ಮಾಯಿಲ್
ಬಂಧಿತರು.

ಸೋಮವಾರ ಸಂಜೆ ಚಿಂತಾಮಣಿ ಗ್ರಾಮಾಂತರ ಠಾಣೆ ಪಿಎಸ್‌ಐ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಕಡಪ–ಬೆಂಗಳೂರು ರಸ್ತೆಯ ಮಾಡಿಕೆರೆ ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಐದು ಮಂದಿ ದ್ವಿಚಕ್ರವಾಹನದಲ್ಲಿ ಮದನಪಲ್ಲಿ ಕಡೆಯಿಂದ ಬರುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ವಾಹನಗಳನ್ನು ತಿರುಗಿಸಿಕೊಂಡಿದ್ದಾರೆ ಎಂದು ಹೇಳಿದರು.

ADVERTISEMENT

ಇದನ್ನು ಕಂಡ ಪೊಲೀಸರು ತಕ್ಷಣವೇ ಇವರನ್ನು ಬೆನ್ನತ್ತಿದರು. ಈ ವೇಳೆ ದ್ವಿಚಕ್ರವಾಹನದಿಂದ ವ್ಯಕ್ತಿಯೊಬ್ಬ ಗೋಣಿ ಚೀಲವನ್ನು ಬೀಳಿಸಿದ್ದಾನೆ. ಇವರನ್ನು ವಶಕ್ಕೆ ಪಡೆದು ಗೋಣಿಚೀಲ ಪರಿಶೀಲಿಸಿದಾಗ ಅದರಲ್ಲಿ ಶ್ರೀಗಂಧದ ತುಂಡುಗಳು ಇದ್ದವು. ಬಂಧಿತರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧೆಡೆ ರೈತರ ತೋಟಗಳಲ್ಲಿದ್ದ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೇಳಿದರು.

ಮೊದಲಿಗೆ ಐದು ಮಂದಿಯನ್ನು ಬಂಧಿಸಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಮತ್ತಿಬ್ಬರನ್ನು ಬಂಧಿಸಲಾಗಿದೆ. ಶ್ರೀಗಂಧವನ್ನು ಯಾರಿಗೆ ಮಾರಾಟ ಮಾಡುತ್ತಿದ್ದರು. ಮತ್ತಷ್ಟು ಮಂದಿ ಈ ತಂಡದಲ್ಲಿ ಇದ್ದಾರೆಯೇ ಎನ್ನುವುದು ಮತ್ತಷ್ಟು ತನಿಖೆಯಿಂದ ತಿಳಿಯಲಿದೆ ಎಂದು ಹೇಳಿದರು.

ಒಟ್ಟು 70 ಕೆ.ಜಿ ಗಂಧವನ್ನು ವಶಕ್ಕೆ ಪಡೆದಿದ್ದು, ಇದರ ಮೌಲ್ಯ ₹ 21 ಲಕ್ಷ ಎಂದು ಅಂದಾಜಿಸಲಾಗಿದೆ.ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಹುಮಾನನೀಡಲಾಗುವುದು ಎಂದರು.

ಚಿಂತಾಮಣಿ ಡಿವೈಎಸ್‌ಪಿ ಕುಶಾಲ್ ಚೌಕ್ಸೆ, ಚಿಂತಾಮಣಿ ನಗರ ಠಾಣೆ ಇನ್‌ಸ್ಪೆಕ್ಟರ್ ಎ.ಎಸ್. ವಿಶ್ವಾಸ್, ಕೆಂಚಾರ್ಲಹಳ್ಳಿ ಪಿಎಸ್‌ಐ ಪುರುಷೋತ್ತಮ್, ಗ್ರಾಮಾಂತರ ಠಾಣೆ ಪಿಎಸ್‌ಐ ನಾರಾಯಣಸ್ವಾಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.