ಶಿಡ್ಲಘಟ್ಟ: ತಾಲ್ಲೂಕಿನಾದ್ಯಂತ ಸಡಗರದಿಂದ ರಾಮನವಮಿಯನ್ನು ಭಾನುವಾರ ಆಚರಿಸಲಾಯಿತು. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇವಾಲಯಗಳಲ್ಲಿ ಪೂಜೆ ಮಾಡಿ ಮಂಗಳಾರತಿ ನೆರವೇರಿಸಲಾಯಿತು.
ಹೆಸರು ಬೇಳೆ ಹಾಗೂ ಪಾನಕವನ್ನು ಪ್ರಸಾದವನ್ನಾಗಿ ಎಲ್ಲ ಕಡೆಯೂ ಭಕ್ತರಿಗೆ ಹಂಚಲಾಯಿತು. ದೇವಾಲಯಗಳ ಮುಂದೆ ಹಾಗೂ ರಸ್ತೆಗಳಲ್ಲಿ ಸಾಗುವವರನ್ನು ಕರೆದು ಹಂಚಿದರು.
ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯ ಮೂರ್ತಿಗೆ ಹೂವಿನ ಅಲಂಕಾರ ಮಾಡಿ ಪೂಜಿಸಲಾಯಿತು. ಬಹುತೇಕ ರಾಮನ ದೇವಾಲಯಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ರಾಮನಾಮ ಜಪ ಮುಗಿಲು ಮುಟ್ಟಿತ್ತು.
ಕೋಟೆ ಆಂಜನೇಯ, ಮಯೂರ ವೃತ್ತದ ಆಂಜನೇಯ, ಇದ್ಲೂಡು ಮಾರ್ಗದ ಗಾಂಧಿನಗರದಲ್ಲಿನ ಮುನೇಶ್ವರ, ಆಂಜನೇಯ ದೇವಾಲಯ, ಚಿಂತಾಮಣಿ ಮಾರ್ಗದ ವೀರಾಂಜನೇಯ, ಅಪ್ಪೇಗೌಡನಹಳ್ಳಿ ಗೇಟ್ನ ಬಯಲಾಂಜನೇಯ, ಚೌಡಸಂದ್ರದ ಶ್ರೀಪ್ರಸನ್ನಾಂಜನೇಯ, ವೀರಾಪುರದ ವೀರಾಂಜನೇಯಮಿ, ತಿಮ್ಮನಾಯಕನಹಳ್ಳಿಯ ರಾಮನಗುಡಿ ಸೇರಿದಂತೆ ನಾನಾ ಕಡೆ ವಿಜೃಂಭಣೆಯಿಂದ ರಾಮನವಮಿ ಆಚರಿಸಲಾಯಿತು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ವ್ಯಾಸರಾಯರ ಕಾಲದ ಆಂಜನೇಯ ದೇವಾಲಯದಲ್ಲಿ ಅಖಂಡ ರಾಮಕೋಟಿ ಏರ್ಪಡಿಸಲಾಗಿತ್ತು. ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಬಯಲಾಂಜನೇಯ ದೇವಾಲಯದಲ್ಲಿ 101 ಲೀಟರ್ ಹಾಲಿನ ಅಭಿಷೇಕ, ಗಂಧದ ಅಭಿಷೇಕ, ಮಂಗಳಾರತಿ, ತೀರ್ಥ ಪ್ರಸಾದ, ಪಾನಕ ಹೆಸರು ಬೇಳೆ ವಿತರಿಸಲಾಯಿತು. ಉಟ್ಲೊತ್ಸವ ಮತ್ತು ಸಂಜೆ ಲವಕುಶ ಹರಿಕಥೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.