ಚಿಕ್ಕಬಳ್ಳಾಪುರ: ‘ಭಾರತ ಕಂಡ ಅಪ್ರತಿಮ ದೇಶಭಕ್ತ ಸುಭಾಷ್ ಚಂದ್ರ ಬೋಸ್ ಅವರ ಜೀವನವನ್ನು ಇಂದಿನ ಯುವಜನರು ಆದರ್ಶವಾಗಿಟ್ಟು ಕೊಳ್ಳಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಹೇಳಿದರು.
ನಗರದಲ್ಲಿ ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.
‘ದೇಶ ಕಂಡ ಅಪರೂಪದ ಸೇನಾನಿ ಸುಭಾಷ್ ಚಂದ್ರ ಅವರು ತಮ್ಮ ಶಿಸ್ತುಬದ್ದ ಜೀವನದಿಂದ ಯುವಕರಿಗೆ ಮಾದರಿಯಾಗಿದ್ದರು. ಭಾರತದ ವಿಮೋಚನೆಗೆ ಶ್ರಮಿಸಿದವರು. ಕೇವಲ ಹೋರಾಟದಿಂದ ಮಾತ್ರ ದೇಶಕ್ಕೆ ಸ್ವತಂತ್ರ ಸಿಗುವುದು ಎಂದು ನಂಬಿದ್ದ ಅವರು ಅದಕ್ಕಾಗಿ ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು’ ಎಂದು ತಿಳಿಸಿದರು.
‘ವಿದೇಶ ಪರ್ಯಟನೆ ಮಾಡಿ ಬ್ರಿಟಿಷರ ವಿರುದ್ಧ ಹೋರಾಡಲು ಸ್ವಂತ ಸೇನೆಯನ್ನು ಕಟ್ಟಿದ ಮಹಾನ್ ನಾಯಕ ನೇತಾಜಿ.ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ. ಅವರು ಬದುಕಿದ ಕಾಲದಲ್ಲಿ ಜನಮನ್ನಣೆ ಗಳಿಸಿ ಮಹಾತ್ಮರಾಗುತ್ತಾರೆ. ಸ್ವತಂತ್ರಕ್ಕಾಗಿ 6 ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಇದನ್ನು ಈಗಿನ ಯುವಜನತೆ ನೆನೆಯಬೇಕು’ ಎಂದರು.
ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ಕೆ.ವಿ.ನವೀನ್ ಕಿರಣ್, ನಂದಿ ಎಂ ಆಂಜಿನಪ್ಪ, ಯಲುವಹಳ್ಳಿ ರಮೇಶ್, ಎಸ್.ಪಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಪ್ರಧಾನ ಕಾರ್ಯದರ್ಶಿ ಸುರೇಶ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ಎನ್ಎಸ್ಯುಐ ಸಂಚಾಲಕ ಕುಂದಲಗುರ್ಕಿ ಮುನೀಂದ್ರ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.