ಚಿಕ್ಕಬಳ್ಳಾಪುರ: ‘ಅನರ್ಹ ಶಾಸಕ ಡಾ.ಕೆ.ಸುಧಾಕರ್ ಒಬ್ಬ ಸಮಯ ಸಾಧಕ ರಾಜಕಾರಣಿಯಾಗಿದ್ದು, ಮುಖ್ಯಮಂತ್ರಿಯಾದವರನ್ನು ಹೊಗಳಿ ಲಾಭ ಮಾಡಿಕೊಳ್ಳುವ ಕಲೆ ಅವರಿಗೆ ಕರಗತವಾಗಿದೆ. ಇದೀಗ ಅವರು ಯಡಿಯೂರಪ್ಪ ಅವರನ್ನು ಹೊಗಳು ಆರಂಭಿಸಿದ್ದಾರೆ’ ಎಂದು ಮಾಜಿ ಸಚಿವ ಶಿವಮೂರ್ತಿ ನಾಯ್ಕ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದು ಕಾಂಗ್ರೆಸ್ ಸರ್ಕಾರ. ‘ಕಳೆದ ಆರು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಅಭಿವೃದ್ಧಿಯಾಗಿದೆ ಎಂದರೆ ಅದು ಕಾಂಗ್ರೆಸ್ ಮಾಡಿದ ಸಾಧನೆ.ಚಿಕ್ಕಬಳ್ಳಾಪುರಕ್ಕೆ ಬಿಜೆಪಿಯವರು ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ಎಸ್.ಎಂ .ಕೃಷ್ಣ ಅವರ ಜನ್ಮ ಚರಿತ್ರೆ ಕಾಂಗ್ರೆಸ್ನಲ್ಲಿದೆ. ಅವರನ್ನು ಮುಖ್ಯಮಂತ್ರಿ, ವಿದೇಶಾಂಗ ಸಚಿವ, ರಾಜ್ಯಪಾಲರನ್ನಾಗಿ ಮಾಡಿದ್ದು ಕಾಂಗ್ರೆಸ್. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ’ ಎಂದು ತಿಳಿಸಿದರು.
‘ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಅವರು ಹೃದಯ ಶ್ರೀಮಂತಿಕೆ ಉಳ್ಳ ನಾಯಕರು. ಅವರು ಬೂಟಾಟಿಕೆ ಮಾಡುವುದಿಲ್ಲ, ಅನ್ಯಾಯವನ್ನು ಸಹಿಸುವುದಿಲ್ಲ. ನಾವೆಲ್ಲ ವಿದ್ಯಾರ್ಥಿ ದೆಸೆಯಿಂದಲೇ ಪರಸ್ಪರ ಬಲ್ಲವರು. ನಾನು ನಾಲ್ಕು ಬಾರಿ ಶಾಸಕನಾಗಿ, ಸಚಿವ ಕೂಡ ಆಗಿದ್ದೆ. ಅಂಜನಪ್ಪ ಅವರು ಈ ಮೊದಲೇ ಶಾಸಕರಾಗಬೇಕಿತ್ತು. ಆದರೆ. ದುರಾದೃಷ್ಟ ಆಗಲಿಲ್ಲ. ಈ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿ ಸಚಿವರು ಸಹ ಆಗುತ್ತಾರೆ. ಡಿ.9ರ ನಂತರ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗುತ್ತದೆ’ ಎಂದರು.
‘ಕಾಂಗ್ರೆಸ್ ಅನೇಕ ಮಸೂದೆಗಳನ್ನು ಜಾರಿಗೆ ತಂದು ಬಡವರ ಕಣ್ಣಿರು ಒರೆಸುವ ಕೆಲಸ ಮಾಡಿದೆ. ಆದ್ದರಿಂದ, ಚಿಕ್ಕಬಳ್ಳಾಪುರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ’ ಎಂದು ತಿಳಿಸಿದರು. ಕಾಂಗ್ರೆಸ್ ಮುಖಂಡರಾದ ಪ್ರಕಾಶ್, ವೆಂಕಟೇಶ್ ಹಾಜರಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.